ವಾಣಿ ಶಿಕ್ಷಣ ಸಂಸ್ಥೆಗಳ ಬಸ್ ಚಾಲಕ ಶಶಿಧರ ಗೌಡ ಪಣಿಕ್ಕಲ್ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ತಾತ್ಕಾಲಿಕ ಬಸ್ ಚಾಲಕ ವಿನಯ (ಶಶಿಧರ ) ಗೌಡ (58 ವರ್ಷ) ಹೃದಯಾಘಾತದಿಂದ ನಿಧನರಾದ ಘಟನೆ ಎ.15ರಂದು ನಡೆದಿದೆ.

ಇವರು ವಾಣಿ ಶಿಕ್ಷಣ ಸಂಸ್ಥೆಗಳ ಶಾಲಾ ಮಕ್ಕಳ ಬಸ್ ನಲ್ಲಿ ತಾತ್ಕಾಲಿಕ ಚಾಲಕರಾಗಿ ಕೆಲವು ವರ್ಷಗಳಿಂದ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಮಂಗಳೂರು ಬೆಸೆಂಟ್ ಕಾಲೇಜ್‌ನಲ್ಲಿ ಹತ್ತನೇ ತರಗತಿ ಮಕ್ಕಳ ಪ್ರಶ್ನೆ ಪರೀಕ್ಷೆ ಮೌಲ್ಯಮಾಪನ ಮಾಡಲು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಮಂಗಳೂರಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದರು.
ಮಧ್ಯಾಹ್ನ ಊಟ ಮುಗಿದ ನಂತರ ಬಸ್ ನಲ್ಲಿ ವಿಶ್ರಾಂತಿಗಾಗಿ ಮಲಗಿದ್ದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಜೆ ಶಿಕ್ಷಕರು ಬಂದು ಬಸ್ ಹತ್ತಿ ನೋಡಿದಾಗ ಮಲಗಿದ್ದ ಸ್ಥಿತಿಯಲ್ಲಿದ್ದರು.ನಂತರ ಶಿಕ್ಷಕರು ಅವರನ್ನು ಎಬ್ಬಿಸುವಾಗ ಚಾಲಕ ವಿನಯ (ಶಶಿಧರ) ಗೌಡ ಮೃತ ಪಟ್ಟಿರುವುದನ್ನು ಗಮನಿಸಿ ಪಕ್ಕದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಚಾಲಕ ಮೃತಪಟ್ಟಿರುವುದಾಗಿ ಧೃಡ ಪಡಿಸಿದರು.

ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಬೆಳ್ತಂಗಡಿಗೆ ರಾತ್ರಿ ತರಲಾಯಿತು.
ಈ ಸಂದರ್ಭದಲ್ಲಿ ವಿಷಯ ತಿಳಿದ ತಕ್ಷಣ ವಾಣಿ ಶಿಕ್ಷಣ ಸಂಸ್ಥೆಗಳ ಸಮಿತಿ ಪದಾಧಿಕಾರಿಗಳು, ಉಪನ್ಯಾಸಕರು,ಶಿಕ್ಷಕರು ಮಂಗಳೂರಿಗೆ ತೆರಳಿ ಎಲ್ಲಾ ರೀತಿಯ ಸಹಕರ ನೀಡಿ ಮೃತ ದೇಹವನ್ನು ಬೆಳ್ತಂಗಡಿಗೆ ತಂದು ಕುಟುಂಬದ ಸದಸ್ಯರಿಗೆ ನೀಡುವ ಮೂಲಕ ಸಹಕರಿಸಿದ್ದರು.

ಇವರು ವೇಣೂರು ನಿವಾಸಿಯಾಗಿದ್ದು, ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!