ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಬಾಲಕಿ ಅಕ್ಷರಿ ಶೆಟ್ಟಿ

Suddi Udaya

ಉಜಿರೆ: ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ ಬಲ್ಲವರು. ಪ್ರಾಚೀನ ಕಾಲದಿಂದಲೂ ಜಡೆಯ ಬಹುರೂಪವನ್ನು ಕವಿಗಳು ವರ್ಣನಾತ್ಮಕವಾಗಿ ಚಿತ್ರಿಸಿದ್ದಾರೆ. ಸೌಂದರ್ಯ, ಸಂಸ್ಕಾರ, ಸಂಸ್ಕೃತಿ ಪ್ರಜ್ಞೆಯ ಪ್ರತೀಕವಾಗಿ ಬಹಳಷ್ಟು ಆಸ್ಥೆಯಿಂದ, ಪ್ರೀತಿಯಿಂದ ತನ್ನ ಜಡೆಯನ್ನು ಮಾರುದ್ಧ ಬೆಳೆಸಿದವರು ಉಜಿರೆಯ ಅಕ್ಷರಿ ಶೆಟ್ಟಿಯವರು.

ಮಂಗಳೂರಿನ ಮಂಗಳ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‌ನ ಪ್ರೊಫೆಸರ್ ಆಗಿರುವ ಶ್ರೀಮತಿ ಅಕ್ಷತಾ ಆಳ್ವ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮೂಡಬಿದ್ರಿಯ ಆಡಳಿತಾಧಿಕಾರಿ ಹರೀಶ್ ಶೆಟ್ಟಿ ದಂಪತಿ ಪುತ್ರಿ 5ನೇ ತರಗತಿಯಲ್ಲಿ ಕಲಿಯುತ್ತಿರುವ ಅಕ್ಷರಿ ಶೆಟ್ಟಿ ಯವರು ಅದ್ಯಾವ ಪ್ರೀತಿಯಲ್ಲಿ ನೀಳಕೇಶವನ್ನು ಬೆಳೆಸಿದ್ದರೋ ಅಷ್ಟೇ ಪ್ರೀತಿಯಲ್ಲಿ ಅ ಜಡೆಯನ್ನು ಕತ್ತರಿಸಿ ಕ್ಯಾನ್ಸರ್ ಪೀಡಿತರಿಗೆ ದಾನವಾಗಿ ನೀಡಿದರು.

ಈ ವಿಶೇಷ ದಾನ ಇರುವುದು ಸತ್ ಚಿಂತನೆಯ ಸಮಾಜಮುಖಿ ನಡೆ. ನಾವು ಏನೇ ಕಲಿತರೂ ಅದು ಈ ಸಮಾಜದಿಂದಾನೆ ಕಲಿಯುವುದು, ಹೀಗಿರುವಾಗ ಸಮಾಜಕ್ಕೆ ನಾವು ನಮ್ಮಿಂದ ಸಾಧ್ಯವಿರುವ ಏನಾದರೊಂದನ್ನು ಕೊಡುಗೆಯಾಗಿ ನೀಡಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಿದ ಈ ಹುಡುಗಿಗೆ ಕಾಣಿಸಿದ್ದು ನಿತ್ಯನಿರಂತರ ನೋವು ನರಳಾಟಗಳ ಮಧ್ಯೆ ತಮ್ಮ ಮುಂದಿನ ಜೀವನದ ಬಗ್ಗೆ ಯೋಚಿಸಲೂ ಅಸಮರ್ಥರಾಗಿ ಖಿನ್ನತೆಯ ಲೋಕದಲ್ಲಿ ಹುದುಗಿಹೋದ ಕ್ಯಾನ್ಸರ್ ಪೀಡಿತರು. ಎಲ್ಲರ ಮೊಗದಲ್ಲಿ ಅಲ್ಲವಾದರೂ ಕೆಲವರ ಮೊಗದಲ್ಲಾದರೂ ಮತ್ತೊಮ್ಮೆ ಕಳೆದುಹೋದ ಅವರ ನಗುವನ್ನು ಕಾಣಬೇಕೆಂಬ ಹಂಬಲದಿಂದ ತನ್ನ ಅತೀ ಪ್ರೀತಿಯ ಕೂದಲನ್ನು ದಾನವಾಗಿ ನೀಡಿ ಸಮಾಜದ ಎಲ್ಲರಿಗೂ ಆದರ್ಶವಾಗಿದ್ದಾರೆ. ಕುಮಾರಿ ಅಕ್ಷರಿಯ ಈ ನಡೆ ಎಲ್ಲರಿಂದಲೂ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಅಕ್ಷರಿಯ ಈ ಕಾರ್ಯ ಸರ್ವರಿಗೂ ಮಾದರಿಯಾಗಲಿ ಎನ್ನುವ ಆಶಯ.

Leave a Comment

error: Content is protected !!