ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಬೆಳ್ತಂಗಡಿ: 2023-24 ನೆಯ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಜೂ.9ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಳ್ತಂಗಡಿಯ ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ‍ಬಿ. ಸುವರ್ಣ ಹಾಗೂ ಕಲ್ಮಂಜ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಪೂರ್ಣಿಮಾ ಜೈನ್ ಭಾಗವಹಿಸಿದರು.

ವಿಧ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅತಿಥಿಗಳು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು, ವಿದ್ಯಾರ್ಥಿಗಳ ಸಾಧನೆಗೆ ಕಾರಣಕರ್ತರಾದ ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನವನ್ನು ಸಹ ಶ್ಲಾಘನೆ ಮಾಡಿದರು. ವ್ಯವಹಾರವನ್ನಷ್ಟೇ ಉದ್ದೇಶವಾಗಿಟ್ಟುಕೊಳ್ಳದೆ, ಸಾಮಾಜಿಕ ಕೆಲಸಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತಷ್ಟು ಉತ್ಸಾಹದಿಂದ ಹೆಚ್ಚು ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತದೆ ಎಂಬ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ವೇಳೆ ಎಸ್. ಎಸ್. ಎಲ್. ಸಿ ವಿಭಾಗದಲ್ಲಿ ಚಿನ್ಮಯ್ ಜಿ. ಕೆ ಎಸ್. ಡಿ. ಎಮ್ ಉಜಿರೆ, ತನಿಶ್ ಆರ್. ಬಿ ಸೆಂಟ್ ಮೇರಿಸ್ ಲಾಯಿಲ, ತನುಶ್ರೀ ಸರಕಾರಿ ಪ್ರೌಢಶಾಲೆ ಕಲ್ಮಂಜ, ಹಂಸಿನಿ ಭೀಡೆ ಎಸ್. ಡಿ. ಎಮ್. ಧರ್ಮಸ್ಥಳ, ಪಿ. ಯು. ಸಿ ವಿಭಾಗದಲ್ಲಿ ವಿಜ್ಞಾನ ವಿಭಾಗ ಅಭಿಷೇಕ್ ವೈ. ಎಸ್ : ಎಕ್ಸೆಲ್ ಕಾಲೇಜು ಗುರುವಾಯನಕೆರೆ, ಆಶೀತ ಜೈನ್ ಎಕ್ಸೆಲ್ ಕಾಲೇಜು ಗುರುವಾಯನಕೆರೆ, ವಾಣಿಜ್ಯ ವಿಭಾಗ ಮುಸ್ಕಾನ್ ಕೌಷರ್ : ವಾಣಿ ಕಾಲೇಜು ಬೆಳ್ತಂಗಡಿ, ನಮೃತ. ಎಸ್ : ವಾಣಿ ಕಾಲೇಜು ಬೆಳ್ತಂಗಡಿ, ಕಲಾ ವಿಭಾಗ ಶ್ರೀನಿಧಿ ಎಸ್. ಡಿ. ಎಮ್ ಕಾಲೇಜು ಉಜಿರೆ, ಸನುಷ ಪಿಂಟೋ ವಾಣಿ ಕಾಲೇಜು ಬೆಳ್ತಂಗಡಿ, ಪವನ್ ಕುಮಾರ್ ವಾಣಿ ಕಾಲೇಜು ಬೆಳ್ತಂಗಡಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಾರಸ್ ಪೃಥ್ವಿ ಜ್ಯುವೆಲ್ಸ್ ನ ವ್ಯವಸ್ಥಾಪಕ ಸಂತೋಷ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Leave a Comment

    error: Content is protected !!