ಎಸ್.ಡಿ.ಎಮ್. ಪ.ಪೂ. ಕಾಲೇಜಿನಲ್ಲಿ, ಸ್ಪರ್ಧಾತ್ಮಕ ತರಗತಿಗಳ ಉದ್ಘಾಟನೆ

Suddi Udaya

ಉಜಿರೆ : ಇಲ್ಲಿನ ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ಈ ವರ್ಷದ ಸ್ಪರ್ಧಾತ್ಮಕ ತರಗತಿಗಳನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.

ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ ಸೋಮಶೇಖರ ಶೆಟ್ಟಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕಳೆದ ವರ್ಷದ ಕರ್ನಾಟಕ ಸಿ. ಇ. ಟಿ. ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ 1576 ನೇ ರ್‍ಯಾಂಕ್ ಪಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿ ಕೃಪಾನಿಧಿ ಎನ್ ಎಲ್ ಇವರನ್ನು ಸನ್ಮಾನಿಸಲಾಯಿತು.


ಸನ್ಮಾನಿತರಾಗಿ ಮಾತನಾಡಿದ ಕೃಪಾನಿಧಿ, ತಾನು ಹೇಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ ಎರಡನ್ನೂ ಸಮನಾಗಿ ಎದುರಿಸಿ ತಾನು ಈ ಸಾಧನೆ ಮಾಡಿದೆ, ತಾನು ಓದುತ್ತಿದ್ದ ಪುಸ್ತಕಗಳು, ಕಾಲೇಜಿನಲ್ಲಿ ನಡೆಸುತ್ತಿದ್ದ ಪರೀಕ್ಷೆಗಳಿಗೆ ನಡೆಸುತ್ತಿದ್ದ ಪೂರ್ವ ತಯಾರಿ, ಸಮಯದ ಹೊಂದಾಣಿಕೆ ಹಾಗೂ ಇವತ್ತಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕ್ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಿದರು.
ಸ್ಪರ್ಧಾತ್ಮಕ ತರಗತಿಯ ಮುಖ್ಯ ಸಂಯೋಜಕರಾದ ಶೃತ ಅಕಾಡೆಮಿ, ಮಂಗಳೂರಿನ ಡಾ. ಶೃತಕೀರ್ತಿ ರಾಜ್ ಮಾತನಾಡಿ ಈ ವರ್ಷದ ಸ್ಪರ್ಧಾತ್ಮಕ ತರಗತಿಗಳ ಸ್ವರೂಪ ಹೇಗೆ, ಯಾವ ರೀತಿ ನಡೆಯುತ್ತದೆ ಎಂಬುದರ ಪೂರ್ವ ಯೋಜನೆಗಳ ಬಗ್ಗೆ ವಿವರಿಸಿದರು.


ಉದ್ಘಾಟಕರಾಗಿ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ ಸೋಮಶೇಖರ ಶೆಟ್ಟಿ ಮಾತನಾಡುತ್ತ ಜೀವನದಲ್ಲಿ ಒಂದು ಸ್ಪಷ್ಟ ಗುರಿ ಇರಲಿ. ಸ್ಪಷ್ಟ ಗುರಿ ಇದ್ದಾಗ ಮಾತ್ರ ಉತ್ತಮ ಸಾಧನೆ ಸಾಧ್ಯವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇವತ್ತಿನ ಸನ್ಮಾನಿತ ಕೃಪಾನಿಧಿಯೇ ಉದಾಹರಣೆ. ಶೃದ್ದೆ ಮತ್ತು ಏಕಾಗ್ರತೆ ಈವೆರಡೂ ಕಲಿಕಾ ಸಮಯದಲ್ಲಿ ಬಹಳ ಮುಖ್ಯ. ಎಷ್ಟೋ ಕನಸುಗಳನ್ನು ಹೊತ್ತು ನಿಮ್ಮ ತಂದೆ ತಾಯಿ ಅವರೆಲ್ಲರ ಸುಖಗಳನ್ನು ತ್ಯಜಿಸಿ ನಿಮ್ಮ ಕನಸಿಗೆ ನೀರೆರೆಯುತ್ತಿದ್ದಾರೆ ಅದನ್ನು ನೀವು ಹುಸಿಗೊಳಿಸದೇ ಸದುಪಯೋಗ ಪಡಿಸಿಕೊಳ್ಳಿ. ಅಂದು ಹೇಳಿದ ಪಾಠ ಪ್ರವಚನಗಳನ್ನು ಅಂದೇ ಓದಿದರೆ ಬಹಳ ಸುಲಭವಾಗುತ್ತದೆ. ಮುಂದಿನ ಸುಖಕರ ಜೀವನಕ್ಕಾಗಿ ಇಂದು ಕಷ್ಟಪಡಲೇಬೇಕು.

ಈ ಸಮಾಜದಲ್ಲಿ ಸಾಧನೆಯ ಹೆಗ್ಗುರುತನ್ನು ಮೂಡಿಸಿದಾಗ ಮಾತ್ರ ಜೀವನಕ್ಕೊಂದು ಸಾರ್ಥಕ ಬರುತ್ತದೆ ಆ ನಿಟ್ಟಿನಲ್ಲಿ ನಿಮ್ಮ ಬದ್ಧತೆ ಇರಲಿ ಎಂದು ತಮ್ಮ ಪ್ರೇರಣಾ ಮಾತುಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಸಹ ಸಂಯೋಜಕರುಗಳಾದ ಡಾ. ರಾಜೇಶ್ವರಿ ಕೆ ಆರ್, ಶ್ರೀಮತಿ ಅನಿತಾ ಕೆ ಪಿ, ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಭೌತ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಸರ್ವರನ್ನೂ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಡಾ. ರಾಜೇಶ್ವರಿ ಕೆ ಆರ್ ವಂದಿಸಿದರು.

Leave a Comment

error: Content is protected !!