ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳಿಂದ ತಪ್ತಮುದ್ರಾಧಾರಣೆ

Suddi Udaya

ಉಜಿರೆ: ಆಷಾಢ ಶುದ್ಧ ಏಕಾದಶಿಯಂದು  ಶ್ರೀ ಮನ್ನಾರಾಯಣ  ಯೋಗ ನಿದ್ರೆಗೆ  ತೆರಳುವ  ಪರಮ ಪರ್ವಕಾಲ.  ಈ ಪುಣ್ಯ ಕಾಲದ ಪ್ರಥಮೈಕಾದಶಿಯಂದು ಭಗವಂತನ ಚಿಹ್ನೆಗಳಾದ  ಶಂಖ ಮತ್ತು ಚಕ್ರ ಮುದ್ರೆಗಳನ್ನು   ಸುದರ್ಶನ ಹೋಮದಿಂದ ಅಭಿಮಂತ್ರಿಸಿ  ಭಕ್ತಾದಿಗಳು ಧಾರಣೆ ಮಾಡುವುದರಿಂದ  ಸಕಲ ದೈಹಿಕ ವ್ಯಾಧಿಗಳು ದೂರವಾಗಿ  ಶಾರೀರಿಕ ಹಾಗು ಮಾನಸಿಕವಾಗಿ ಪರಿಶುದ್ಧವಾಗುವುದೆಂದು ಪರಂಪರಾಗತವಾಗಿ  ಆಚರಿಸಿಕೊಂಡು ಬಂದಿದೆ.  ಭಕ್ತರು ಶ್ರದ್ಧೆಯಿಂದ  ಮಹಾವಿಷ್ಣುವಿನ  ಶಂಖ , ಚಕ್ರ ಚಿಹ್ನೆಗಳನ್ನು ಧಾರಣೆ ಮಾಡುವುದರಿಂದ  ಆರೋಗ್ಯಕರವಾಗಿಯೂ   ಉಪಯುಕ್ತವಾಗಿ  ಶಾಂತಿ, ನೆಮ್ಮದಿ ದೊರೆಯುವುದು  ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು. 

ಅವರು ಜು 17 ರಂದು ಆಷಾಢ ಪ್ರಥಮೈಕಾದಶೀ ಪ್ರಯುಕ್ತ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ  ವೇದಮೂರ್ತಿ ಶ್ರೀಪತಿ ಎಳಚಿತ್ತಾಯರ  ಪೌರೋಹಿತ್ಯದಲ್ಲಿ  ನಡೆದ  ಸುದರ್ಶನ ಹವನದ ಬಳಿಕ ನೆರೆದ ತಾಲೂಕಿನ  ಸಮಸ್ತ  ಭಕ್ತಾದಿಗಳಿಗೆ ಮುದ್ರಾಧಾರಣೆ ನೆರವೇರಿಸಿ ಮಾತನಾಡಿದರು. ಬೆಳ್ತಂಗಡಿ ತಾಲೂಕಿನ ಸುಮಾರು 5೦೦ಕ್ಕೂ ಮಿಕ್ಕಿ  ಪುರುಷರು, ಮಹಿಳೆಯರು ಹಾಗು ಮಕ್ಕಳು ಶ್ರೀಗಳವರಿಂದ ಮುದ್ರಾಧಾರಣೆ ಹಾಕಿಸಿಕೊಂಡರು.     

27ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆ : ಸುಬ್ರಹ್ಮಣ್ಯ ಮಠದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ತಮ್ಮ ಕ್ರೋಧಿ ಸಂವತ್ಸರದ 27ನೇ ವರ್ಷದ ಚಾತುರ್ಮಾಸ್ಯ ವೃತವನ್ನು  ಕುಕ್ಕೆ ಸುಬ್ರಹ್ಮಣ್ಯ  ಮೂಲ ಮಠದಲ್ಲಿ  ಆ.25 ರಿಂದ ಮೊದಲ್ಗೊಂಡು ಸೆ. 18 ರವರೆಗೆ ನಡೆಸಲಿದ್ದು ಈ ಸಂದರ್ಭದಲ್ಲಿ  ಧಾರ್ಮಿಕ, ಕಾರ್ಯಕ್ರಮಗಳು , ಭಾಗವತಾದಿ  ಉಪನ್ಯಾಸಗಳು ,  ಸಂಗೀತ, ಭರತನಾಟ್ಯ, ಯಕ್ಷಗಾನ, ತಾಳಮದ್ದಳೆ, ಹರಿಕತೆ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು  ಭಗವದ್ಭಕ್ತರು  ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಗಳವರು ತಿಳಿಸಿದ್ದಾರೆ. 

Leave a Comment

error: Content is protected !!