ಧರ್ಮಸ್ಥಳ :ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ

Suddi Udaya

ಧರ್ಮಸ್ಥಳ: ಸೇವಾಭಾರತಿ (ರಿ.), ಕನ್ಯಾಡಿ ಇದರ ಆಶ್ರಯದಲ್ಲಿ ಶ್ರೀ ದುರ್ಗಾ ಮಾತೃಮಂಡಳಿ ಕನ್ಯಾಡಿ ಮತ್ತು ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರ ಸಂಘ (ನಿ), ಉಜಿರೆ ಇವುಗಳ ಸಹಯೋಗದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ 1 ತಿಂಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಜುಲೈ 22 ರಂದು ಧರ್ಮಸ್ಥಳದ ನಾರ್ಯದ ಮಂಜುಶ್ರೀ ಅಗ್ರಹಾರದ ಬಳಿ ಇರುವ ಬನದಡ್ಡ ಜಿಮ್ ನ ಕಟ್ಟಡದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಾರ್ಯದ ಸ್ಥಳೀಯರಾದ ಶ್ರೀಮತಿ ವಿಜಯಲಕ್ಷ್ಮಿ ಇವರು ಮಹಿಳಾ ಸಬಲೀಕರಣದ ಮಹತ್ವ ತಿಳಿಸಿ ತರಬೇತು ಪಡೆಯಲು ಬಂದಂತಹ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷರಾದ ಶಾಂತಾ ಪಿ ಶೆಟ್ಟಿ ಮಹಿಳೆಯರಿಗೆ ಶಿಕ್ಷಣದ ಅಗತ್ಯತೆಯ ಜೊತೆಗೆ ಮಹಿಳೆಯರು ಸ್ವ-ಉದ್ಯೋಗ ತರಬೇತಿ ಪಡೆದು, ಸ್ವಾವಲಂಬಿಯಾಗಿ ಜೀವನ ನಡೆಸಿದಾಗ, ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ನೀಡಿದಂತಾಗುತ್ತದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರರಾದ ರಶ್ಮಿ ಇವರು ತರಬೇತಿಯಲ್ಲಿ ತಿಳಿಸಿಕೊಟ್ಟ ಹೊಲಿಗೆಯ ವಿಧಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ಶಿಬಿರಾರ್ಥಿಗಳು ಒಂದು ತಿಂಗಳ ಅವಧಿಯಲ್ಲಿ ರವಿಕೆ ಮತ್ತು ಚೂಡಿದಾರಗಳನ್ನು ಹೊಲಿಯಲು ಕಲಿತಿರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು. ಅವರನ್ನು ಸೇವಾಭಾರತಿ ಹಾಗೂ ಶ್ರೀ ದುರ್ಗಾ ಮಾತೃಮಂಡಳಿ ಪರವಾಗಿ ಗೌರವಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶ್ರೀ ದುರ್ಗಾ ಮಾತೃಮಂಡಳಿಯ ಸದಸ್ಯರಾದ ಸವಿತಾ ಎಮ್ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು 21 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೇವಾಭಾರತಿ ಡಾಕ್ಯುಮೆಂಟೇಶನ್ , ಮಾನಿಟರಿಂಗ್ ಮತ್ತು ಇವಲ್ಯೂಟಿಂಗ್ ಸಂಯೋಜಕರಾದ ಸುಮ ನಿರೂಪಿಸಿ, ಅಕೌಂಟೆಂಟ್ ಕು. ಅಕ್ಷತಾ ಸ್ವಾಗತಿಸಿ, ಧನ್ಯವಾದವಿತ್ತರು.

Leave a Comment

error: Content is protected !!