ಶಕ್ತಿಶಾಲಿ ಭಾರತದ ಸಶಕ್ತ ಬಜೆಟ್ : ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಜು.23 ರಂದು ಸಂಸತ್ತಿನಲ್ಲಿ ಮಂಡಿಸಿದ ನರೇಂದ್ರ ಮೋದಿ ಸರಕಾರದ ಮೂರನೇ ಅವಧಿಯ ಪ್ರಥಮ ಮುಂಗಡ ಪತ್ರವು ಜನಪರ ಕಾಳಜಿಯ, ವಿಕಸಿತ ಭಾರತದ ವಿಶ್ವಾಸನೀಯ ಬಜೆಟ್ ಆಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


ನವ ಭಾರತದ ಕಲ್ಪನೆಯಂತೆ ನವ (9) ಆದ್ಯತೆಗಳನ್ನು ನಿಗದಿ ಪಡಿಸಿದ ಹಣಕಾಸು ಸಚಿವರ ಮುಂಗಡ ಪತ್ರದಿಂದ ಕೃಷಿ ಹಾಗೂ ಆಹಾರ ಉತ್ಪನ್ನಗಳ ಉತ್ಪಾದನೆ ಹೆಚ್ಚಿ, ಸಂರಕ್ಷಣೆಯೊಂದಿಗೆ ಉತ್ತಮ ಮಾರುಕಟ್ಟೆಯೂ ಒದಗಿ ರೈತಾಪಿ ವರ್ಗಕ್ಕೆ ನೆರವಾಗಲಿದೆ. ಕೃಷಿ ವಲಯದಲ್ಲಿ 1 ಕೋಟಿ ನೈಸರ್ಗಿಕ ಕೃಷಿ ಪದ್ಧತಿಗೆ ಉತ್ತೇಜನ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಸಣ್ಣ ಕೈಗಾರಿಕೆ ಮಧ್ಯಮ ವರ್ಗದ ಅಭಿವೃದ್ಧಿಗೆ ಆದ್ಯತೆಯೊಂದಿಗೆ ನಗರಗಳ ಅಭಿವೃದ್ಧಿಗೂ ಪ್ರೋತ್ಸಾಹ ನೀಡಿ ಸ್ಟಾಂಪ್ ಡ್ಯೂಟಿ ಕಡಿಮೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರಕಾರಗಳಿಗೆ ಮನವಿ ಮೂಲಕ ತಿಳಿಸಿರುವುದು ಮಧ್ಯಮ ವರ್ಗದವರ ಮೇಲಿನ ಕಾಳಜಿಯನ್ನು ತೋರಿಸಿದೆ.

ಮುದ್ರಾ ಯೋಜನೆಯ ಸಾಲ 10 ಲಕ್ಷ ರೂಪಾಯಿಂದ 20 ಲಕ್ಷಕ್ಕೆ ವಿಸ್ತರಣೆ. ಮಹಿಳಾ ಸಬಲೀಕರಣಕ್ಕೆ 3 ಲಕ್ಷ ಕೋಟಿ ಮೀಸಲು, ನಾಲ್ಕನೇ ಹಂತದ ಗ್ರಾಮ ಸಡಕ್ ಯೋಜನೆಗೆ 25000 ಗ್ರಾಮೀಣ ರಸ್ತೆಗಳ ಪ್ರಸ್ತಾಪ ಮೂಲಭೂತ ಸೌಕರ್ಯಕ್ಕೆ 11 ಲಕ್ಷ ಕೋಟಿ ಮೀಸಲಿನೊಂದಿಗೆ ನೆರೆ ಪರಿಹಾರ ಯೋಜನೆ, ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ, ಪಿ.ಎಂ ಆವಾಸ್ ಅಡಿ 3 ಕೋಟಿ ಹೆಚ್ಚುವರಿ ಮನೆ, ಶ್ಯೂರಿಟಿ ಇಲ್ಲದೆ ಬೃಹತ್ ಯಂತ್ರೋಪಕರಣಗಳ ಖರೀದಿಗೆ ಕೈಗಾರಿಕೆಗಳಿಗೆ ಅವಕಾಶ ಇಂತಹ ಹಲವು ಯೋಜನೆಗಳು ನಿಶ್ಚಿತವಾಗಿಯೂ ಮುಂದಿನ ಪೀಳಿಗೆ ಅಭಿವೃದ್ಧಿ ಪಥದತ್ತ ನೆರವಾಗುವ ದಿಟ್ಟ ಹೆಜ್ಜೆಯಾಗಿದೆ.


ಮಾರಕ ಕಾಯಿಲೆ ಕ್ಯಾನ್ಸರ್ ಔಷಧಗಳ ತೆರಿಗೆ ರದ್ದು, ಮೊಬೈಲ್ ಬಿಡಿಭಾಗಗಳ ಇಳಿಕೆ, ದುಡಿಯುವ ವರ್ಗಕ್ಕೆ ಆದಾಯ ತೆರಿಗೆಯ ಹೊರೆಯನ್ನು ಕಡಿಮೆ ಮಾಡಿದ್ದು, ತೆರಿಗೆಯ ಸರಳೀಕರಣ ವ್ಯವಸ್ಥೆ ಸುತ್ತ್ಯಾರ್ಹವಾಗಿದ್ದು ಶಕ್ತಿಶಾಲಿ ಭಾರತಕ್ಕೆ ಸಶಕ್ತ ಬಜೆಟ್ ಇದಾಗಲಿದೆ. ನಾಡಿನ ಜನತೆಗೆ ಇಂತಹ ಅತ್ಯುತ್ತಮ ಬಜೆಟ್ ನೀಡಿದ ಕೇಂದ್ರ ಹಣಕಾಸು ಸಚಿವರನ್ನು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದಿಸಿದ್ದಾರೆ.

Leave a Comment

error: Content is protected !!