ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಆಟಿಡೊಂಜಿ ದಿನ

Suddi Udaya

ಉಜಿರೆ : ಶ್ರೀ ಧರ್ಮಸ್ಠಳ ಮಂಜ್ನುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ಆಟಿಡೊಂಜಿ ದಿನ ಆಚರಣೆಯನ್ನು ಸಿಂಗಾರ ಅರಳಿಸುವ ಮೂಲಕ ಉದ್ಘಾಟಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೃಷಾಂಕ್ ಖಾಡಿಲ್ಕರ್, ಪ್ರಗತಿಪರ ಕೃಷಿಕರು, ಇವರು ಮಾತನಾಡಿ ಈ ಆಷಾಢ ಮಾಸದ ಜಡಿ ಮಳೆಯಲ್ಲಿ ತುಳುನಾಡಿನ ಸಂಸ್ಕೃತಿ, ರೀತಿ ರಿವಾಜುಗಳನ್ನು ಮತ್ತೆ ನೆನಪಿಸಿ ನಗರೀಕರಣದ ಛಾಯೆಯನ್ನು ಓಡಿಸುವ ಪ್ರಯತ್ನವನ್ನು ಮಾಡಿರುವುದು ಸಂತಸದ ಸಂಗತಿಯೆಂದರು. ಆಟಿಡೊಂಜಿ ದಿನ ಎಂಬ ಆಚರಣೆಯು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ಸುತ್ತಮುತ್ತಲಿನ ದೇಶದಲ್ಲೂ ಮಹತ್ವ ಪಡೆದಿದೆ ಹಾಗೂ ಆಚರಿಸಲಾಗುತ್ತದೆ. ಇದು ತುಳುನಾಡಿಗೆ ಹೆಮ್ಮೆಯ ವಿಷಯ. ನಮಗೆ ತುಳುವರ ಹಾಗೂ ತುಳುವಿನ ಬಗ್ಗೆ ಅಭಿಮಾನವಿರಬೇಕು ಎಂದರು.


ಕಾರ್ಯಕ್ರಮದ ಮತ್ತೋರ್ವ ಅತಿಥಿಯಾದ ರಂಗ ನಿರ್ದೇಶಕ ಯಶವಂತ್, ಇವರು ಮಾತನಾಡಿ ಆಟಿ ಕಳೆಂಜದ ಹಿನ್ನಲೆಯ ಕಥೆಗಳನ್ನು ತಿಳಿಸಿ ತುಳು ಭಾಷೆಯ ಸೊಬಗನ್ನು ಜಾತ್ಯಾತೀತ ತುಳುವ ಸಂಭ್ರಮಗಳ ಬಗ್ಗೆ ತಿಳಿಸಿಕೊಟ್ಟು ನಮ್ಮ ನೆಲದ ಸಂಸ್ಕೃತಿಯನ್ನು ತಿಳಿದುಕೊಂಡು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.


ಇಂದಿನ ಈ ವೈಜ್ಞಾನಿಕ ದಿನಗಳಲ್ಲಿ ಆಟಿಡೊಂಜಿ ದಿನದಂತಹ ದಿನಾಚರಣೆಗಳು ನಮ್ಮ ಹಿರಿಯರ ಆಲೋಚನೆ ಹಾಗೂ ಆರೋಗ್ಯದ ಬಗ್ಗೆ ಇದ್ದ ಕಾಳಜಿಯನ್ನು ಈಗಿನ ಜನಾಂಗಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಹಿರಿಯರ ಆಚರಣೆಗಳ ಮೇಲೆ ವೈಜ್ಞಾನಿಕ ಅನ್ವೇಷಣೆಗಳು ನಡೆದಾಗ ಹಲವಾರು ಸತ್ಯಗಳು ಹೊರಬರಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ತಿಳಿಸಿದರು.


ಪ್ರಶಿಕ್ಷಣಾರ್ಥಿಗಳಾದ ಕೀರ್ತನ್ ಕುಮಾರ್ ಮತ್ತು ತಂಡದವರು ಆಟಿ ಕಳೆಂಜದ ಹಾಡನ್ನು ಹಾಡಿದರು. ತುಳುನಾಡಿನಲ್ಲಿ ಆಷಾಢ(ಆಟಿ) ಮಾಸದಲ್ಲಿ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳನ್ನು ಎಲ್ಲರೂ ಸ್ವೀಕರಿಸುವ ಮೂಲಕ ಆಟಿಡೊಂಜಿ ದಿನವು ಆಷಾಢ ಮಾಸದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಿವಿಧ ಪರಿಕರಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರಾದ ಶ್ರೀಮತಿ ವಿದ್ಯಾಶ್ರೀ ಪಿ, ತಿರುಮಲೇಶ್ ರಾವ್ ಎನ್ ಕೆ, ಶ್ರೀಮತಿ ಅನುಷಾ ಡಿ. ಜೆ., ಹರೀಶ್ ಕುಮಾರ್ ಹಾಗೂ ಶ್ರೀಮತಿ ಚೈತ್ರಾ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ಈ ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಪೂಜಾಶ್ರೀ ಅತಿಥಿ ಪರಿಚಯಿಸಿ, ವಿಜೇತ ಸ್ವಾಗತಿಸಿ, ಶೊಭಿತಾ ವಂದಿಸಿ, ಮಮತಾ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Comment

error: Content is protected !!