ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯಧನ ಹಾಗೂ ಅಪಘಾತ ಚಿಕಿತ್ಸಾ ವೆಚ್ಚದ ಮರುಪಾವತಿಯಲ್ಲಿರುವ ಅವ್ಯವಸ್ಥೆಯ ಬಗ್ಗೆ ಮತ್ತು ಕಾರ್ಮಿಕರ ಹೆಲ್ತ್ ಚೆಕಪ್‌ನ ಯೋಜನೆಯಲ್ಲಿ ಮಂಡಳಿಯ ಹಣ ದುರುಪಯೋಗ: ಕೂಡಲೇ ಕ್ರಮ ವಹಿಸುವಂತೆ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ರಿಂದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ರಿಗೆ ಮನವಿ

Suddi Udaya

ಆಗುತ್ತಿರುವ ಕುರಿತು.

ಬೆಳ್ತಂಗಡಿ: ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯಧನ/ಪ್ರಮುಖ ಕಾಯಿಲೆಗಳ ಚಿಕಿತ್ಸಾ ವೆಚ್ಚ ಹಾಗೂ ಅಪಘಾತ ಚಿಕಿತ್ಸಾ ವೆಚ್ಚದಲ್ಲಿ ಈಗ ಸಿಗುತ್ತಿರುವ ಸಹಾಯಧನಗಳು ತೀರಾ ಅತ್ಯಲ್ಪ ಹಾಗೂ ನಗಣ್ಯವಾಗಿವೆ. ಅಲ್ಲದೇ ಪ್ರಸ್ತುತ ಚಾಲ್ತಿಯಲ್ಲಿರುವ ಮಂಜೂರಾತಿ ವಿಧಾನ ಹಾಗೂ ಆಸ್ಪತ್ರೆ ವೆಚ್ಚಕ್ಕೆ ಹೋಲಿಸಿದರೆ ಮರುಪಾವತಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೀರಾ ಅತ್ಯಲ್ಪ ಮೊತ್ತ ಬಂದಿರುವುದರಿಂದ ಬಾಧಿತನಾಗುವ ಕಾರ್ಮಿಕನಿಗೆ ಯೋಜನೆಯ ಪ್ರಯೋಜನಗಳು ಪೂರ್ಣ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಚಿಕಿತ್ಸಾ ವೆಚ್ಚದ ಸಹಾಯಧನಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ, ಅರ್ಜಿ ಸಲ್ಲಿಸಲು ಕಾರ್ಮಿಕರಿಗೆ ತುಂಬಾ ಓಡಾಟ, ಸಮಯ ಮತ್ತು ಹಣ ಬೇಕಾಗುತ್ತದೆ. ಆದುದ್ದರಿಂದ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ನಗದು ರಹಿತ ಸೇವೆಯ ಮೂಲಕ ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರಿಗೆ ಲಭಿಸುವಂತೆ ಕ್ರಮ ವಹಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ರವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕಟ್ಟಡ ಮಂಡಳಿಯಲ್ಲಿ ಇದೀಗ ರಾಜ್ಯದಾದ್ಯಂತ ಕಾರ್ಮಿಕರ ಹಾಗೂ ಅವರ ಅವಲಂಬಿತರ ಹೆಲ್ತ್ ಚೆಕಪ್ ಕ್ಯಾಂಪ್‌ಗಳನ್ನು ನಡೆಸುತ್ತಿದ್ದು, ಒಬ್ಬರ ಚೆಕಪ್‌ಗೆ 2,940/- ರೂಪಾಯಿಯನ್ನು ಕಟ್ಟಡ ಮಂಡಳಿಯು ಟೆಂಡರ್ ಪಡೆದ ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದು, ಈ ಕಾಟಾಚಾರದ ಹೆಲ್ತ್ ಚೆಕಪ್ ಕ್ಯಾಂಪ್‌ಗಳಿಂದ ಕಾರ್ಮಿಕರಿಗಾಗಲಿ ಹಾಗೂ ಅವಲಂಬಿತರಿಗಾಗಲಿ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ. ಕಟ್ಟಡ ಮಂಡಳಿಯಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕಾದ ಹಣವು ಈ ರೀತಿಯ ಅನಾವಶ್ಯಕ ಯೋಜನೆಯಿಂದ ಬರಿದಾಗುತ್ತಿದೆ. ಆದುದ್ದರಿಂದ ಈ ಕುರಿತು ಮರುವಿಮರ್ಶೆ ಮಾಡಿ ಕಾರ್ಮಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕ್ರಮ ವಹಿಸಬೇಕಾದ ತುರ್ತು ಅಗತ್ಯವಿದೆ. ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಅಪಘಾತವಾದ ನಂತರ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಆದರೇ ಇದೀಗ ಮಂಡಳಿಯಲ್ಲಿ ಅಪಘಾತ ಪರಿಹಾರ ಮತ್ತು ಪಿಂಚಣಿಯು ಅಪಘಾತದ ನಂತರದ ವಿಶ್ರಾಂತಿಯ ಸಮಯದಲ್ಲಿ ದೊರೆಯುತ್ತಿಲ್ಲ. ಈ ಸಂಬಂಧಿತ ನಿಯಮಾವಳಿಗಳಿಗೆ ಸೂಕ್ತ ಬದಲಾವಣೆ ತರಬೇಕಾಗಿದೆ. ಅಲ್ಲದೇ ಕಾರ್ಮಿಕರು ಮರಣವಾದ ನಂತರ ಅವರ ಅವಲಂಬಿತ ಮಕ್ಕಳಿಗೆ ವಿದ್ಯಾರ್ಥಿ ವೇತನವಾಗಲಿ ಹಾಗೂ ಪತ್ನಿಗೆ ವಿಧವಾ ವೇತನವಾಗಲಿ ಸಿಗುತ್ತಿಲ್ಲ. ಈ ಕುರಿತು ಕೂಡಲೇ ಕ್ರಮ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

Leave a Comment

error: Content is protected !!