ಬೆಳಾಲು ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಬಡೆಕ್ಕಿಲ್ಲಾ ಬರ್ಬರ ಹತ್ಯೆ ಪ್ರಕರಣ: ಆಸ್ತಿ ಪಾಲಿನ ವಿಚಾರದಲ್ಲಿ ಆಳಿಯ ಮತ್ತು ಮೊಮ್ಮಗನಿಂದ ಕೊಲೆ ಪ್ರಕರಣ ಬೆಳಕಿಗೆ- ಪೊಲೀಸರ ಯಶಸ್ವಿ ಕಾರ್ಯಾಚರಣೆ- ಕಾಸರಗೋಡಿನ ಮನೆಯಿಂದ ಆರೋಪಿಗಳಿಬ್ಬರ ಬಂಧನ

Suddi Udaya

ಮೃತ ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯ

—————————————————-

ಬೆಳ್ತಂಗಡಿ : ಮಗಳಿಗೆ ಆಸ್ತಿ ಮತ್ತು ಜಾಗ ಪಾಲು ಮಾಡಿ ಕೊಡದೇ ಇರುವ ದ್ವೇಷದಲ್ಲಿ ಅವರದೇ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬೆಳಾಲು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದ್ದು, ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಬಗ್ಗೆ ವರದಿಯಾಗಿದೆ.

ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯ ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53ವ) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20ವ) ಎಂಬಾತನನ್ನು ಆ.24 ರಂದು ಕಾಸರಗೋಡು ಮನೆಯಿಂದ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕೆ ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಧರ್ಮಸ್ಥಳ ಪೊಲೀಸರು ಮೊಬೈಲ್ ,ಸಿಸಿಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಈ ಪ್ರಕರಣವನ್ನು ಬೇಧಿಸಿದ್ದಾರೆ. ಆರೋಪಿಗಳಿಬ್ಬರನ್ನು ಬೆಳ್ತಂಗಡಿ ನ್ಯಾಯಾಧೀಶರ ಎದರು ಆ.24 ರಂದು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ನಿವೃತ್ತ ಶಿಕ್ಷಕಿ ದಿ.ಯು.ಲೀಲಾ(75ವ) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು. ಇದೆ ಕಾರಣದಿಂದ ಬಾಲಕೃಷ್ಣ ಭಟ್ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ ಮತ್ತು ಮಗ ಮುರಳಿ ಕೃಷ್ಣ ದ್ವೇಷದಿಂದ ಹತ್ಯೆ ಮಾಡುವ ಯೋಜನೆ ರೂಪಿಸಿದ್ದರು.
ಅಪ್ಪ-ಮಗ ಇಬ್ಬರು ಕಾಸರಗೋಡುನಿಂದ ಮಾರಕಾಸ್ತ್ರಸಹಿತ ಸ್ಕೂಟರ್‌ನಲ್ಲಿ ರಾಘವೇಂದ್ರ ಕೆದಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಮಂಗಳೂರಿಗೆ ಬಂದು ಅಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದಿದ್ದರು. ಬೆಳಾಲಿನಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯರ ಜೊತೆ ಬಾಳೆ ಎಲೆಯಲ್ಲಿ ಊಟ ಮಾಡಿ ಬಳಿಕ ಚಾ ಕುಡಿದ ಬಳಿಕ, ತಾವು ರೂಪಿಸಿದ ಕೊಲೆ ಸಂಚಿನಂತೆ, ಜೊತೆಗೆ ತಂದಿದ್ದ ಆಯುಧದಿಂದ ಮೊಮ್ಮಗ ಮುರುಳಿಕೃಷ್ಣ ಹಿಂಬದಿಯ ಕುತ್ತಿಗೆಗೆ ಕಡಿದಿದ್ದಾರೆ ಈ ವೇಳೆ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಾಲಕೃಷ್ಣ ಬಡೆಕ್ಕಿಲ್ಲಾಯರು ಓಡಿ ಬಂದಾಗ ಮತ್ತೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಬಳಿಕ ನಳ್ಳಿ ನೀರಿನ ಕೆಳಗೆ ಹಾಕಿದ್ದ ಹಾಸು ಕಲ್ಲು ತಲೆಯ ಮೇಲೆ ಇಟ್ಟು ಬಳಿಕ ಅಲ್ಲಿಂದ ಅಳಿಯ-ಮೊಮ್ಮಗ
ನೇರ ಸ್ಕೂಟರ್ ಮೂಲಕ ಕಾಸರಗೋಡು ಮನೆ ಸೇರಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇಬ್ಬರು ಸೇರಿ ಬಾಲಕೃಷ್ಣ ಬಡೆಕ್ಕಿಲ್ಲಾಯರನ್ನು ಕೊಲೆ ಮಾಡುವುದು ಪತ್ನಿ ವಿಜಯಲಕ್ಷ್ಮಿಗೆ ತಿಳಿದಿರಲಿಲ್ಲ. ಧರ್ಮಸ್ಥಳ ಪೊಲೀಸರು ಕಾಸರಗೋಡು ಮನೆಗೆ ಬಂದು ವಶಕ್ಕೆ ಪಡೆದ ಬಳಿಕವಷ್ಟೇ ಕುಟುಂಬಸ್ಥರಿಗೆ ಕೊಲೆ ಮಾಡಿದ ಪ್ರಕರಣ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.

ಬಾಲಕೃಷ್ಣ ಭಟ್ ಜೊತೆ ಕಿರಿಯ ಮಗ ಸುರೇಶ್ ಭಟ್ ನನ್ನು ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು ಹಾಗೂ ಬಾಲಕೃಷ್ಣ ಭಟ್ ಕೊಲೆ ಬಳಿಕ ಸುರೇಶ್ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು. ಅವರು ಬಾರದೆ ಇದ್ದಾಗ ಬಾಲಕೃಷ್ಣ ಭಟ್ ಅವರ ೫೦ ಸಾವಿರದ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಹಂತಕರು ತೆಗೆದುಕೊಂಡು ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಲೆ: ಕೊಲೆ ಬಳಿಕ ಮಂಗಳೂರು ಶ್ವಾನ ದಳ ತಂಡ ಘಟನಾ ಸ್ಥಳಕ್ಕೆ ಬಂದು ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳ ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಸುಳಿವು ನೀಡಿತ್ತು ಬಳಿಕ ಅಲ್ಲಿಂದ ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು ಪೊಲೀಸ್ ಇಲಾಖೆಯ ಶ್ವಾನ ಬ್ರೇವ್. ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕುಟುಂಬದೊಳಗಿನವರೆ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಗೊತ್ತಾಗಿದೆ ಇದರಿಂದ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ನಂಬರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಆಳಿಯ ಮತ್ತು ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.

ಬಾಲಕೃಷ್ಣ ಭಟ್ ಕೊಲೆ ಬಳಿಕ ಬೆಳಾಲು ಮನೆಗೆ ಆ.೨೧ ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಆಳಿಯ ರಾಘವೇಂದ್ರ ಕೆದಿಲಾಯ ಕಾರಿನಲ್ಲಿ ಬಂದಿದ್ದರು. ಮೊಮ್ಮಗ ಮುರುಳಿಕೃಷ್ಣ ಮಾತ್ರ ಬಂದಿರಲ್ಲಿಲ್ಲ. ವಿಚಾರಣೆಯಲ್ಲಿ ಬಾಲಕೃಷ್ಣ ಭಟ್ ಅವರನ್ನು ತಾವು ತಂದಿದ್ದ ಮಾರಕಾಸ್ತ್ರದಿಂದ ರಾಘವೇಂದ್ರ ಕೆದಿಲಾಯನ ಮಗ ಮುರುಳಿಕೃಷ್ಣ ಅಜ್ಜನ ಕುತ್ತಿಗೆಗೆ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಂದೆ ರಾಘವೇಂದ್ರ ಕೆದಿಲಾಯ ನೋಡುತ್ತಾ ನಿಂತಿದ್ದ ಬಳಿಕ ಕಪಾಟಿನಲ್ಲಿದ್ದ ದಾಖಲೆ ಪತ್ರ ಹಾಗೂ ಬಾಂಡ್ ಪೇಪರ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮುರುಳಿಕೃಷ್ಣ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಕಿಶೋರ್.ಪಿ , ಸಬ್ ಇನ್ಸ್ಪೆಕ್ಟರ್ ಸಮರ್ಥ್.ಆರ್.ಗಾಣಿಗೇರಾ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Leave a Comment

error: Content is protected !!