ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಆ.31 ಕೊನೆಯ ದಿನಾಂಕ

Suddi Udaya

ಬೆಳ್ತಂಗಡಿ: ಪಡಿತರ ಚೀಟಿದಾರರು ಪ್ರತೀ ತಿಂಗಳು ಪಡಿತರ ಪಡೆಯುವುದಲ್ಲದೆ ಅನ್ನ ಭಾಗ್ಯ ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸರಕಾರವು ಕಳೆದ 5 ವರ್ಷಗಳಿಂದ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವಂತೆ ನಿರ್ದೇಶನ ನೀಡಿದ್ದರೂ ಕೆಲವೊಂದು ಪಡಿತರ ಚೀಟಿ ಸದಸ್ಯರು ಇನ್ನೂ ಇ-ಕೆವೈಸಿ ಮಾಡದೇ ಇರುವುದು ಕಂಡುಬರುತ್ತಿದೆ. ಪ್ರಸ್ತುತ ಸರಕಾರವು ಯಾವುದೇ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲೂ ಕೂಡಾ ಅವಕಾಶ ಕಲ್ಪಿಸಿರುತ್ತದೆ. ಜೀವಮಾಪನ ನೀಡಿ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಸದಸ್ಯರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡುವುದು. ಸರಕಾರವು ಆ.31 ರವರೆಗೆ ಅವಕಾಶ ಕಲ್ಪಿಸಿದ್ದು ತಪ್ಪದೆ ಇ-ಕೆವೈಸಿ ಮಾಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿ ಇ-ಕೆವೈಸಿಯನ್ನು ಮಾಡುವಂತೆ ತಿಳಿಸಿದೆ. ಇದು ಪಡಿತರ ಚೀಟಿದಾರರಿಗೆ ಕೊನೆಯದಾಗಿ ತಿಳುವಳಿಕೆ ನೀಡುವುದಾಗಿದ್ದು ಆ.31 ರ ನಂತರ ಇ-ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವಾಸ್ತವ್ಯಕ್ಕೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಇ-ಕೆವೈಸಿ ಮಾಡಿಸಿ ಕೊಳ್ಳಬೇಕು.

ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಇ-ಕೆವೈಸಿ ಮಾಡಿಸಿ ಕೊಳ್ಳಲು ಅವಕಾಶವಿದೆ. ಪಡಿತರಚೀಟಿದಾರರ ಎಲ್ಲಾ ಸದಸ್ಯರ ಬಯೋದೃಢೀಕರಣ ಮಾಡಿಸಬೇಕು. ವಿಶೇಷ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಆ ಬಗ್ಗೆ ದೃಢಪತ್ರ,ಆಧಾರ್ ಸಂಖ್ಯೆ, ಫೋನ್ ನಂಬರ್, ಅಡುಗೆ ಅನಿಲದ ಮಾಹಿತಿ ಹಾಗೂ ಕುಟುಂಬದ ಸದಸ್ಯರ ಸಂಬಂಧವನ್ನು ಸಹ ಇ-ಕೆವೈಸಿಯಲ್ಲಿ ನಮೂದಿಸಬೇಕು. ಇದು ಜಿಲ್ಲೆಯ ಹಾಗೂ ಪರ ಜಿಲ್ಲೆಯ ಪಡಿತರ ಚೀಟಿದಾರರಿಗೆ ಅಂತಿಮ ಅವಕಾಶವಾಗಿದ್ದು, ಇ-ಕೆವೈಸಿ ಮಾಡಿಸಿ ಕೊಳ್ಳದ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ರದ್ದಾಗಬಹುದು. ಪಡಿತರ ಚೀಟಿಗಳಲ್ಲಿ ಭಾಗಶ: ಜೀವಮಾನ ನೀಡಲ್ಪಟ್ಟು ಬಾಕಿ ಉಳಿದಿರುವ ಸದಸ್ಯರು ಕೂಡಾ ಈ ತಿಂಗಳ ಅಂತ್ಯದವರೆಗೆ ಕಾಯದೇ ಕೂಡಲೇ ಇ-ಕೆವೈಸಿ ಮಾಡಿಸಿ ಕೊಂಡು ಪಡಿತರ ಚೀಟಿಯನ್ನು ಊರ್ಜಿತವಾಗಿರಿಸಿಕೊಳ್ಳಬಹುದಾಗಿರುತ್ತದೆ

Leave a Comment

error: Content is protected !!