ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚಿನ ಬಿಲ್‌ಗಳಲ್ಲಿ ಅವ್ಯವಹಾರ: ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಸಾಲ್ಯಾನ್ ಆರೋಪ

Suddi Udaya

Updated on:

ಬೆಳ್ತಂಗಡಿ: ರಾಜ್ಯದಲ್ಲಿ ಮೂಡಾ, ವಾಲ್ಮೀಕಿ ನಿಗಮಗಳ ಅವ್ಯವಹಾರ ಸದ್ದು ಮಾಡುತ್ತಿರುವ ನಡುವೆ ಇದೀಗ ಬೆಳ್ತಂಗಡಿ ತಾಲೂಕಿನಲ್ಲೂ ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ್ ಸಾಲ್ಯಾನ್ ರವರು ಆರೋಪಿಸಿದ್ದಾರೆ.

ಅವರು ಆ.27 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.


2024 ಮಾರ್ಚ್ 9ರಂದು ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚಿನ ಬಿಲ್‌ಗಳಲ್ಲಿ ಅವ್ಯವಹಾರಗಳು ನಡೆದಿದೆ. ತಾಲೂಕು ಕಚೇರಿಗೆ ಒರಿಜಿನಲ್ ಬಿಲ್‌ಗಳು ಬಂದಿಲ್ಲ. ಕೆಲವೊಂದರಲ್ಲಿ ಜಿಎಸ್‌ಟಿ ಇಲ್ಲ. ಎಲ್ಲಾ ಬಿಲ್‌ಗಳಲ್ಲಿ ಒಬ್ಬರದ್ದೇ ಕೈ ಬರಹಗಳಿವೆ. ಊಟೋಪಚಾರದ ಖರ್ಚು, ಕಾರ್ಯಕ್ರಮದ ಖರ್ಚು, ಸಮಾವೇಶಕ್ಕೆ ಜನರನ್ನು ಕರೆತರಲು ಬಸ್‌ಗಳ ಖರ್ಚುವೆಚ್ಚಗಳಿಗೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ 3,2೦೦ ಜನರು ಭಾಗವಹಿಸಿದ್ದರು. ವಿಪರ್ಯಾಸ ಏನೆಂದರೆ 5,೦೦೦ ಸಾವಿರ ಜನರ ಊಟದ ಬಿಲ್ ಪಾವತಿಯಾಗಿದೆ. ಆದರೆ ಊಟದ ಪ್ರಾಯೋಜಕತ್ವವನ್ನು ಸೌತಡ್ಕ ಮಹಾಗಣಪತಿ ದೇವಸ್ಥಾನ ವಹಿಸಿತ್ತು ಎಂದು ತಿಳಿಸಿದರು.


ಎಲ್ಲಾ ಖರ್ಚುಗಳ ಪಾವತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ, ಸರ್ಕಾರವೇ ರೂಪಿಸಿದ ನಿಯಮಗಳನ್ನು ಸರ್ಕಾರವೇ ಉಲ್ಲಂಘಿಸಿದೆ. ಆರ್.ಟಿ.ಒ ಕಾಯಿದೆ ಪ್ರಕಾರ ಶಾಲಾ ಬಸ್‌ನ್ನು ಬಾಡಿಗೆಗೆ ಕೊಡುವಂತಿಲ್ಲ. ಇಲ್ಲಿ ಆರ್.ಟಿ.ಒ ಶಾಲಾ ಬಸ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾ ಅಥವಾ ತಹಶೀಲ್ದಾರರು ಕ್ರಮ ಕೈಗೊಳ್ಳುವುದಾ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಗುರುವಾಯನಕೆರೆ ಕಿನ್ಯಮ್ಮ ಸಭಾಭವನದ ಆಸನ ಸಂಖ್ಯೆ ಗರಿಷ್ಠ 2,೦೦೦ ಇದ್ದು, ತಾಲೂಕು ಆಡಳಿತ ನೀಡಿದ ಸಂಖ್ಯೆ, ವ್ಯಯಿಸಿದ ಖರ್ಚಿನಲ್ಲಿರುವ ಸಂಖ್ಯೆ, ಮೊಬಲಗು ಯಾವುದು ಹೊಂದಾಣಿಕೆಯಾಗುತ್ತಿಲ್ಲ. ಈ ಎಲ್ಲಾ ಅವ್ಯವಹಾರ ಗಮನಿಸಿದಾಗ ಸರ್ಕಾರದ ಮೂಡಾ ವಾಲ್ಮೀಕಿ ಹಗರಣದಂತೆ, ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ ಲೂಟಿ ಹೊಡೆದಿದ್ದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಬೆಳ್ತಂಗಡಿಯ ಸಮಾವೇಶದ ಈ ಅವ್ಯವಹಾರದ ಕುರಿತು ತಹಶೀಲ್ದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು. ತಾಲೂಕಿನ ಅಬಕಾರಿ ಇಲಾಖೆಯಲ್ಲೂ ನಿರಂತರವಾಗಿ, ನಿಯಮಬಾಹಿರವಾಗಿ ಮದ್ಯಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಅಕ್ರಮ ವ್ಯವಹಾರದಿಂದ ಅಧಿಕಾರಿಗಳ ಬೆಂಬಲದ ಮೂಲಕ ಕೆಲವು ಪುಡಾರಿಗಳು ಹಪ್ತಾ ವಸೂಲು ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಷರತ್ತುಗಳನ್ನು ಮೀರಿ ಮದ್ಯ ಮಾರಾಟ ಮಾಡಿ ಅಬಕಾರಿ ಕಾಯಿದೆಯನ್ನು ಉಲ್ಲಂಘನೆ ಮಾಡಿದ ಲೈಸೆನ್ಸ್‌ದಾರರ ವಿರುದ್ಧ ಅಬಕಾರಿ ಇಲಾಖೆ ಯಾವುದೇ ಕ್ರಮಕೈಗೊಳ್ಳದೇ ಇರುವ ಕುರಿತು ಅಬಕಾರಿ ಆಯುಕ್ತರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶುಭಕರ ಪೂಜಾರಿ ಅಳದಂಗಡಿ ಉಪಸ್ಥಿತರಿದ್ದರು. ಸಾಮಾಜಿಕ ಹೋರಾಟಗಾರ ಲಕ್ಷ್ಮಣ್ ಜಿ.ಎಸ್. ಉಜಿರೆ ಸ್ವಾಗತಿಸಿ, ಧನ್ಯವಾದವಿತ್ತರು.

Leave a Comment

error: Content is protected !!