ನಾಳ ಅಂಗನವಾಡಿ ಪೋಷನ್ ಮಾಸಾಚರಣೆ ಹಾಗೂ ಮೇಲ್ವಿಚಾರಕಿ ಸನ್ಮಾನ

Suddi Udaya

ಬೆಳ್ತಂಗಡಿ : ಸೆ.14. ಆರೋಗ್ಯವಂತ ಜೀವನಕ್ಕೆ ಪೌಷ್ಟಿಕಾಂಶ ಆಹಾರ ಅಗತ್ಯವಿದೆ.
ಮಾನಸಿಕವಾಗಿ, ಭೌತಿಕವಾಗಿ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಗರ್ಭಿಣಿ ಬಾಣಂತಿ ಮಹಿಳೆಯರು ಹಾಗೂ ಮಕ್ಕಳು ಹಿತ,ಮಿತ ಆಹಾರ ಜೊತೆಗೆ ಪೌಷ್ಟಿಕ ಆಹಾರ ಸೇವನೆಯಿಂದ ಪರಿಪೂರ್ಣ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ನಿವೃತ್ತ ಅಧಿಕಾರಿ ಬನಶಂಕರಿ ವೆಂಕಟೇಶ್ವರ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಸಂಘ ನಾಳ,ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು. ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಮಕ್ಕಳ ಪೋಷಕರು ಮನೆಯಲ್ಲೇ ತಯಾರಿಸಿದ 20 ಕ್ಕೂ ಹೆಚ್ಚಿನ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಪ್ರದರ್ಶನ ಮತ್ತು ಸಾಮೂಹಿಕ ವಿತರಣೆ ಜರುಗಿತು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಮೋಹಿನಿ,ಪುಷ್ಪ, ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕಿ ಮಮತ ವಿ.ಆಳ್ವ, ಸ್ಥಳೀಯರಾದ ಸೌಭಾಗ್ಯ ರಾಜೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಣಿಯೂರು ವಲಯದ ಮೇಲ್ವಿಚಾರಕಿ ನಂದನ ಶೆಟ್ಟಿಯವರು ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾವಣೆ ಹೊಂದಿದ್ದಾರೆ. ಕಣಿಯೂರು ವಲಯದ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯವರ ವತಿಯಿಂದ ಸನ್ಮಾನಿಸಿ,ಗೌರವಿಸಿದರು.
ಈ ಸಂದರ್ಭದಲ್ಲಿ ಕಣಿಯೂರು ವಲಯದ ಅಂಗನವಾಡಿ
ಕಾರ್ಯಕರ್ತೆಯರು,ಸಹಾಯಕಿಯರು,ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು,ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.
ನಾಳ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಸ್ವಾಗತಿಸಿದರು. ರಕ್ತೇಶ್ವರಿ ಪದವು ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್.ವಂದಿಸಿದರು.

Leave a Comment

error: Content is protected !!