24.6 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿವ್ಯಾಂಗರ ಬಾಳಿಗೆ ಬೆಳಕಾದ ಕನ್ಯಾಡಿ ಸೇವಾ ಭಾರತಿ ಸಂಸ್ಥೆಗೆ 20 ವರ್ಷ: ನ.14 : ಸೇವಾನಿಕೇತನದಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸ

ಬೆಳ್ತಂಗಡಿ: ಕಳೆದ 20 ವರ್ಷಗಳಿಂದ ಸಾಮಾಜಿ ಸೇವಾ ಕ್ಷೇತ್ರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸರ್ಕಾರೇತರ ಸೇವಾ ಸಂಸ್ಥೆ ಸೇವಾಭಾರತಿ ಕನ್ಯಾಡಿ ಕಳೆದ 20 ವರ್ಷಗಳಿಂದ ಸಾಮಾಜಿಕ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ವೇತನದ ಮೂಲಕ ಅವರ ಬಾಳಿಗೆ ಬೆಳಕಾದ ಸೇವಾ ಸಂಸ್ಥೆಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸೇವಾ ಸಂಸ್ಥೆಯ ನೂತನ ಕಟ್ಟಡದ ಭೂಮಿ ಪೂಜೆ ನ.೧೪ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿ ಸೇವಾಭಾರತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರು ಹಾಗೂ ಪ್ರಸ್ತುತ ಸಂಸ್ಥೆಯ ಖಜಾಂಚಿಯಾಗಿರುವ ಕೆ. ವಿನಾಯಕ ರಾವ್ ಹೇಳಿದರು.


ಅವರು ಬೆಳ್ತಂಗಡಿ ಸುವರ್ಣ ಆರ್ಕೇಡ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿಲಾನ್ಯಾಸವನ್ನು ಶ್ರೀರಾಮ ಕ್ಷೇತ್ರದ ಸದ್ಗರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಾ.ಸ್ವ.ಸೇ. ಸಂಘದ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯವಾಹಕ ತಿಪ್ಪೇಸ್ವಾಮಿಯವರು ನೆರವೇರಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರುಗಳಾದ ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಗುರುರಾಜ ಶೆಟ್ಟಿ ಗಂಟಿಹೊಳೆ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಶರತ್‌ಕೃಷ್ಣ ಪಡ್ವೆಟ್ನಾಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದ ಸಾಧಕರಾದ ಬೆಳ್ಳಣ್ ಹ್ಯುಮಾನಿಟಿ ಟ್ರಸ್ಟ್ ಸಂಸ್ಥಾಪಕ ರೋಷನ್ ಬೆಳ್ಮಣ್ ಹಾಗೂ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಇವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.


ಸಾಮಾಜಿಕ ಸೇವಾ ಚಟುವಟಿಕೆ 220 ಮಂದಿ ಪುನಶ್ಚೇತನ:
ಸೇವಾಭಾರತಿ ಕಳೆದ 20 ವರ್ಷಗಳ ಸಾಮಾಜಿಕ ಸೇವಾಕಾರ್ಯಗಳಲ್ಲಿ ಶಿಕ್ಷಣ, ಕೃಷಿ, ಮಹಿಳಾ ಸ್ವಾವಲಂಬನ, ಸಂಸ್ಕಾರ, ಆರೋಗ್ಯ, ಜ್ಞಾನಭಾರತಿ, ಯಕ್ಷಾಭಾರತಿ, ನಿರ್ಮಲಭಾರತಿ ಹಾಗೂ ದಿವ್ಯಾಂಗರ ಕ್ಷೇತ್ರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂರಿಗೆ ಪುನಶ್ವೇತನವನ್ನು ಒದಗಿಸುವ ಕಾರ್ಯವು ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿದೆ. ಸುಮಾರು 6 ಜಿಲ್ಲೆಗಳ (ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಹಾಸನ) ವ್ಯಾಪ್ತಿಯನ್ನೊಳಗೊಂಡಂತೆ ಬೆನ್ನುಹುರಿ ಅಪಘಾತಕ್ಕೊಳಗಾಗಿ ಸೊಂಟದ ಕೆಳಭಾಗ ಸ್ಪರ್ಶಜ್ಞಾನ ಮತ್ತು ನಿಯಂತ್ರಣವನ್ನು ಕಳೆದುಕೊಂಡಂತಹ ವಿಶೇಷ ಚೇತನರಿಗಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಸೇವಾಧಾಮ ಎಂಬ ಹೆಸರಿನ ಪುನಶ್ವೇತನ ಕೇಂದ್ರವನ್ನು ಪ್ರಾರಂಭಿಸಿದ್ದು, ಈಗಾಗಲೇ 688 ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, ಕೇಂದ್ರದ ಮುಖಾಂತರ ಸುಮಾರು 220 ಮಂದಿ ಪುನಶ್ಚೇತನವನ್ನು ಪಡೆದುಕೊಂಡಿರುತ್ತಾರೆ ಎಂದು ಹೇಳಿದರು.

10,000+ ಯೂನಿಟ್ ರಕ್ತ ಸಂಗ್ರಹಣೆ:
ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಸಮುದಾಯದಿಂದ ದೂರ ಉಳಿಯುವುದು ಮಾನಸಿಕ ಖಿನ್ನತೆಗೆ ಹಾಗೂ ಹಲವು ದ್ವಿತೀಯಾಂತರ ಸಮಸ್ಯೆಗಳಿಗೆ ಒಳಗಾಗಿರುತ್ತಾರೆ. ಇಂತಹ ದಿವ್ಯಾಂಗರನ್ನು ಒಗ್ಗೂಡಿಸಿ ಅವರಿಗೆ ಫಿಸಿಯೋಥೆರಪಿ ಆಕ್ಯೂಪೇಶನಲ್ ಥೆರಪಿ, ಜೀವನ ಕೌಶಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರ ಜೀವನ ಶೈಲಿಯನ್ನು ಸುಲಭಗೊಳಿಸಿ ಮತ್ತೆ ಸಮಾಜಕ್ಕೆ ಬರುವಂತಹ ಪ್ರಯತ್ನ ಈ ಸಂಸ್ಥೆಯಿಂದ ನಡೆಯುತ್ತಿದೆ. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಒಟ್ಟು 26 ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರ, ೪೬೫ ಸಾಧನ ಸಲಕರಣೆಗಳು, 113 ಮಂದಿ ದಿವ್ಯಾಂಗರಿಗೆ ಸ್ವಉದ್ಯೋಗಕ್ಕೆ ನೆರವು, ಆರೋಗ್ಯಂ ಯೋಜನೆಯಡಿಯಲ್ಲಿ ೯೮ ಶಿಬಿರವನ್ನು ನಡೆಸಿ 10,000+ ಯೂನಿಟ್ ರಕ್ತ ಸಂಗ್ರಹಣೆ, 329 ಉಚಿತ ಮತ್ತು ರಿಯಾಯಿತಿ ದರದಲ್ಲಿ ಆಂಬುಲೆನ್ಸ್ ಸೇವೆ, ಸಬಲಿನಿ ಯೋಜನೆಯಡಿಯಲ್ಲಿ 29 ಟೈಲರಿಂಗ್ ಶಿಬಿರವನ್ನು ನಡೆಸಿ 650 ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗ ಹೀಗೆ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.

ಬೈಂದೂರಿನಲ್ಲಿ 2ನೇ ಕೇಂದ್ರ:
ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ವಿಸ್ತರಿತ ಸೇವೆಗಾಗಿ ಸೇವಾಭಾರತಿಯ 20ನೇ ವರ್ಷದ ಸಂಭ್ರಮದಲ್ಲಿ ಎರಡು ಮಹತ್ವದ ಕಾರ್ಯಗಳನ್ನು ಆಯೋಜಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಇವರ ನೇತೃತ್ವದಲ್ಲಿ ಒತ್ತಡಗಾಯ ನಿರ್ವಹಣೆ ಮತ್ತು ಪುನಶ್ವೇತನ ಕೇಂದ್ರವನ್ನು ಕರ್ನಾಟಕದಲ್ಲಿ 2ನೇ ಕೇಂದ್ರವನ್ನಾಗಿ ಪ್ರಾರಂಭಿಸಲಿದೆ. ಕರ್ನಾಟಕದಾದ್ಯಂತ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ವೇತನವನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಕನ್ಯಾಡಿಯಲ್ಲಿ ಸರಕಾರದಿಂದ ಮಂಜೂರಾದ ಜಾಗದಲ್ಲಿ ನೂತನ ಕಟ್ಟಡದ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಟ್ಟಡದ ನೆಲಮಹಡಿಯ ನಿರ್ಮಾಣಕ್ಕಾಗಿ ಎಂ.ಆರ್.ಪಿ.ಎಲ್ ಕಂಪೆನಿಯ ಸಿಎಸ್‌ಆರ್ ಫಂಡ್‌ನಿಂದ ರೂ. 42 ಲಕ್ಷ ಮಂಜೂರಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸೇವಾ ಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣ ಗೌರಿ, ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ದ.ಕ ಹಾಗೂ ಕೊಡಗು ಕ್ಷೇತ್ರ ಸಂಯೋಜಕ ಕುಸುಮಾಧರ್ ಉಪಸ್ಥಿತರಿದ್ದರು.

Related posts

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಗರ್ಡಾಡಿ: ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ-ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ,ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಡಿ. 10 ರಂದು ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ

Suddi Udaya

ಮರೋಡಿ ಗ್ರಾ.ಪಂನಿಂದ ಪೆರಾಡಿಯಲ್ಲಿ ನಿರ್ಮಿಸಲಾದ ರೂ.5.60 ಲಕ್ಷ ವೆಚ್ಚದ ಸೋಲಾರ್ ದೀಪ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ” ಷೇರು ಮಾರುಕಟ್ಟೆ ವಿಶ್ಲೇಷಣೆ” ಕುರಿತು ಮಾಹಿತಿ ಕಾರ್ಯಾಗಾರ

Suddi Udaya
error: Content is protected !!