
ಶಿಶಿಲ: ಮಕ್ಕಳನ್ನು ಶಾಲೆಗೆ ಕಳುಹಿಸಲು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಘಟನೆ ನ.21ರಂದು ಶಿಶಿಲದಲ್ಲಿ ನಡೆದಿದೆ.

ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ತನ್ನ ಮಕ್ಕಳನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬಿಡಲು ನ.21ರಂದು ಬೆಳಿಗ್ಗೆ 8.30ರ ಸುಮಾರಿಗೆ ಹೋಗುತ್ತಿದ್ದಾಗ ಮಾರ್ಗ ತಿರುವಿನ ಮಧ್ಯೆ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಭಯದಿಂದ ತನ್ನ ಬೈಕ್ ಅನ್ನು ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದಾಗ ಬೈಕ್ ನಿಂದ ಬಿದ್ದು ವಸಂತ ಗೌಡ ಮತ್ತು ಮಕ್ಕಳಾದ ಲಾವ್ಯ, ಹಾಗೂ ಅದ್ವಿತ್ ಗೆ ಮೊಣಕಾಲು ಮತ್ತು ಕೈ ಗಳಿಗೆ ಗಾಯಗಳಾಗಿದೆ. ಅವರು ಬೈಕ್ ಅನ್ನು ಬಿಟ್ಟು ಅಲ್ಲಿಂದ ಓಡಿ ತಪ್ಪಿಸಿಕೊಂಡು ಮನೆ ಸೇರಿದ್ದಾರೆ.

ಓಡುತ್ತಿದ್ದಂತೆಯೇ ಬೈಕ್ ಕಡೆಗೆ ಆಗಮಿಸಿದ ಒಂಟಿ ಸಲಗ ಬೈಕ್ ಅನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಸಂಪೂರ್ಣ ಹಾನಿ ಗೊಳಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪ್ರಕ್ರಿಯಿಸಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.