ಬೆಳ್ತಂಗಡಿ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಡಿ.27ರಂದು ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳು 7 ಸ್ಥಾನಗಳಲ್ಲಿ ಜಯಗಳಿಸಿ ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಹೈಕೋಟು೯ನ ಆದೇಶ ಬರಬೇಕಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಫಲಿತಾಂಶ ಘೋಷಣೆ ಮಾಡದೇ ತಡೆ ಹಿಡಿದಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಧಿಗಳಾದ ಅರವಿಂದ ಕಾರಂತ, ಕೇಶವ ಭಟ್ ಅತ್ತಾಜೆ, ಬಾಲಕೃಷ್ಣ ಪಂಜೋಲಿಮಾರ್, ರಾಧಕೃಷ್ಣ ಶೆಟ್ಟಿ ಕುಂಠಿನಿ, ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಸೌಮ್ಯಲತಾ ಜಯಂತ ಗೌಡ, ಬಾಲು ಬಿ.ಕೆ ಅತ್ಯಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ಬಾಲಕೃಷ್ಣ ಗೌಡ ಕೇರಿಮಾರ್, ಸದಾಶಿವ ಯಾನೆ ಶ್ರೀಧರ ಪೂಜಾರಿ, ಅರುಣ್ಕುಮಾರ್ ಬನಸಿರಿ, ಅಣ್ಣು ನಾಯ್ಕ ಕಲ್ಲೆ, ಬಾಲಕೃಷ್ಣ ಗೌಡ ಹಳೆಪೇಟೆ ಅತ್ಯಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಕಾರ್ಯನಿರ್ವಹಿಸಿದರು.
ನ್ಯಾಯಾಲಯದ ಆದೇಶದ ಬಳಿಕ ಘೋಷಣೆ:
ಸಹಕಾರಿ ಸಂಘದ ಎರಡು ಮಹಾಸಭೆಗೆ ಗೈರು ಹಾಜರಾಗುವ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ. ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ 99 ಮಂದಿ ಸದಸ್ಯರು ಬೆಂಗಳೂರು ಉಚ್ಚನ್ಯಾಲಯದಲ್ಲಿ ಸಲ್ಲಿಸಿದ ರಿಟ್ಪಿಟಿಷನ್ನಂತೆ ನ್ಯಾಯಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಮುಂದಿನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಾಯಲದ ಆದೇಶದಂತೆ ಮತದಾನಕ್ಕೆ ಅನುಮತಿ ಪಡೆದಿರುವ 99 ಮಂದಿಯ ಮತಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ, ಅಭ್ಯರ್ಥಿ, ಏಜಂಟರ ಸಮ್ಮುಖದಲ್ಲಿ ಏಣಿಕೆಯನ್ನು ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಉಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.
ಈಗಾಗಲೇ ಕೋರ್ಟು ನೀಡಿದ ಅನುಮತಿಯಂತೆ ಮತಚಾಲಾಯಿಸಿದ ಸದಸ್ಯರ ಮತ ‘ಸಿಂಧು’ ಎಂದು ಆದೇಶ ಬಂದರೆ, ಕಾಂಗ್ರೆಸ್ ಬೆಂಬಲಿತರ ಅಭ್ಯರ್ಥಿಗಳ ಸ್ಥಾನ 5 ರಿಂದ 10ಕ್ಕೆ ಏರಲಿದೆ. ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ ಸ್ಥಾನ 7 ರಿಂದ 2 ಕ್ಕೆ ಇಳಿಯಲಿದೆ. ಒಂದು ವೇಳೆ ‘ಅಸಿಂಧು’ ಎಂದು ಕೋರ್ಟು ಆದೇಶ ಬಂದರೆ ಈ ಬಾರಿ ಸಂಘದ ಆಡಳಿತ ಬಿಜೆಪಿ ಬೆಂಬಲಿತರ ಪಾಲಾಗಲಿದೆ. ಒಟ್ಟಿನಲ್ಲಿ ಜ.7ರಂದು ಪ್ರಕಟವಾಗಲಿರುವ ಕೋರ್ಟಿನ ಆದೇಶದತ್ತ ಎಲ್ಲರ ಚಿತ್ತ ಹರಿದಿದೆ.