ಉಜಿರೆ : ಉಜಿರೆ ಪೆರ್ಲ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬ್ರಹ್ಮಶ್ರೀ ವೇ| ಮೂ| ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ಕೃಷ್ಣ ಪಡುವೆಟ್ನಯರ ಗೌರವ ಉಪಸ್ಥಿತಿಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಹಾಗೂ ಶ್ರೀ ಉಮಾಮಹೇಶ್ವರ ಸಾನ್ನಿಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಮತ್ತು ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಜ.2 ರಂದು ನಡೆಯಲಿದೆ.
ಕಾರ್ಯಕ್ರಮಗಳು: ಜ.1 ರಂದು ಬೆಳಿಗ್ಗೆ ಪೂರ್ವಭಾವಿ ಹೋಮಗಳು ನೆರವೇರಲಿದೆ. ಜ.2ರಂದು ಗಣಪತಿ ಹೋಮದಿಂದ ಪ್ರಾರಂಭಿಸಿ ವಿವಿಧ ಹೋಮ-ಹವನ, ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ಪಂಜುರ್ಲಿ ದೈವದ ಪದ್ಮಶಿಲಾ ಪ್ರತಿಷ್ಠಾಪನೆ, ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳಿಂದ ಹಸಿರುವಾಣಿ ಕಾಣಿಕೆ, ಹೂವು, ಹಣ್ಣು, ಕಾಯಿ, ಹಿಂಗಾರ, ನಾಗದೇವರ ಅಭಿಷೇಕಕ್ಕೆ ಹಾಲು, ಸೀಯಾಳ, ತುಪ್ಪ, ಜೇನುತುಪ್ಪ ಸ್ವೀಕರಿಸಲಾಗುವುದು. ವಿಶೇಷವಾಗಿ ಅನ್ನಸಂತರ್ಪಣೆಯ ಸೇವೆ ಮಾಡಲು ಇಚ್ಛಿಸುವವರಿಗೆ ಅವಕಾಶವಿದೆ.