April 21, 2025
ಧಾರ್ಮಿಕರಾಷ್ಟ್ರೀಯ ಸುದ್ದಿವರದಿ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ವಿ.ಪ. ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಂತಾಪ

ಬೆಳ್ತಂಗಡಿ: ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕುಂಭಮೇಳದ ತೀರ್ಥ ಸ್ನಾನ ಹಾಗೂ ಅಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಕುರಿತಾಗಿ ನೀಡಿರುವ ಹೇಳಿಕೆ, ಒಬ್ಬ ಭಾರತೀಯನಾಗಿ ನನಗೆ ಅತ್ಯಂತ ನೋವನ್ನುಂಟು ಮಾಡಿದೆ. ಮೌನಿ ಅಮಾವಾಸ್ಯೆಯ ಹಿಂದಿನ ದಿನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡುವ ಪುಣ್ಯ ನನಗೆ ಲಭಿಸಿತು. 50 ಕೋಟಿಗೂ ಅಧಿಕ ಭಕ್ತರು ತೀರ್ಥ ಸ್ನಾನ ಮಾಡಲು ಉತ್ತರಪ್ರದೇಶ ಸರಕಾರ ಮಾಡಿರುವ ಅತ್ಯದ್ಭುತ ವ್ಯವಸ್ಥೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪೊಲೀಸ್ ಇಲಾಖೆಯಂತು ಸುವ್ಯವಸ್ಥೆಗಾಗಿ ತಮ್ಮನು ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ.

ಕೇಂಬ್ರಿಜ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಕುಂಭಮೇಳದ ವ್ಯವಸ್ಥೆ ಒಂದು ಅಧ್ಯಯನದ ವಿಷಯ ಅಂದರೆ ಅದು ಎಷ್ಟು ಉನ್ನತವಾದದ್ದು ಎಂದು ನಾವು ಕಲ್ಪಿಸಿಕೊಳ್ಳಬಹುದು. ನಾನೊಬ್ಬ ಭಾಜಪದ ಕಾರ್ಯಕರ್ತನಾಗಿ ಅಥವಾ ವಿಧಾನಪರಿಷತ್ ಸದಸ್ಯನಾಗಿ ಈ ಮಾತನ್ನು ಹೇಳ್ತಾ ಇಲ್ಲ. ಒಬ್ಬ ಭಾರತೀಯನಾಗಿ ನಾನು ಯೋಗಿ ಆದಿತ್ಯನಾಥ್ ಸರಕಾರದ ಪ್ರಚಂಡ ವ್ಯವಸ್ಥೆಗಾಗಿ ಅವರಿಗೆ ನಾನು ಶತ ನಮನಗಳನ್ನು ಸಲ್ಲಿಸುತ್ತೇನೆ. ನನ್ನ ಮಾತಿನಲ್ಲಿ ನಂಬಿಕೆ ಇಲ್ಲವಾದರೆ ಮಾನ್ಯ ಖರ್ಗೆಯವರು ತಮ್ಮದೇ ಪಕ್ಷದ ಮಾನ್ಯ ಸಭಾಧ್ಯಕ್ಷರಾದ ಖಾದರ್ ಅವರು ಪ್ರಯಾಗ ದರ್ಶನ ಮಾಡಿ ಬಂದಿದ್ದಾರೆ ಅವರನ್ನು ಕೇಳಿಕೊಳ್ಳಬಹುದು.

1954ರಲ್ಲಿ ಇದೇ ಪ್ರಯಾಗದಲ್ಲಿ ಕುಂಭಮೇಳ ನಡೆದಾಗ ಸಾವಿರಾರು ಮಂದಿ ಕಾಲ್ತುಳಿತಕ್ಕೆ ಒಳಗಾಗಿದ್ದರು ಎಂದು ವರದಿಗಳು ಸಾಕ್ಷ್ಯ ನುಡಿಯುತ್ತವೆ. ಹಾಗಂತ ಆ ಘಟನೆಗೆ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಕಾರಣರೆಂದು ನಾವು ಖಂಡಿತವಾಗಿ ಹೇಳೋದಿಲ್ಲ. ಯಾವುದೇ ಪಕ್ಷದ ಜನಪ್ರತಿನಿಧಿಯಾದರು ದೇಶದ ಪ್ರಜೆಗಳಿಗೆ ಕೇಡಾಗಲಿ ಎಂದು ಬಯಸುವುದಿಲ್ಲ. ಹಾಗಿರುವಾಗ ನಿನ್ನೆ ನಡೆದ ಘಟನೆಗೆ ಸರಕಾರವೇ ಹೊಣೆ ಎಂದು ರಾಜಕೀಯ ಮಾಡುವುದು ಎಷ್ಟು ಸರಿ ಖರ್ಗೆ ಅವರೇ.

ಕುಂಭಮೇಳ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ಒಬ್ಬ ನಿಜವಾದ ಭಾರತೀಯನಾದವನು ಕುಂಭಮೇಳ ಸಂಪೂರ್ಣ ಯಶಸ್ವಿಯಾಗಲಿ ಎಂದೇ ಹಾರೈಸುತ್ತಾನೆ. ತಮಗೂ ಅಂತಹ ಒಳ್ಳೆಯ ಮನಸ್ಸಿದೆ. ಆದರೆ ನಿಮ್ಮೊಳಗಿನ ರಾಜಕೀಯ ಪ್ರೇರಿತ ಮನಸ್ಸು ನಿಮ್ಮನ್ನು ಹಾದಿ ತಪ್ಪಿಸುತ್ತಿದೆ. ನೀವು ಹಿರಿಯರು ದಯವಿಟ್ಟು ನಿಮ್ಮ ಹಿರಿತನಕ್ಕೆ ಭಾರತೀಯರೆಲ್ಲರೂ ಗೌರವ ಕೊಡುವಂತೆ ನಡೆದುಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.

Related posts

ನವೀಕೃತಗೊಂಡ ಉಜಿರೆ ಹಳೇಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸ್ತಾಂತರ

Suddi Udaya

ಬೆಳ್ತಂಗಡಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಾಸನದಲ್ಲಿ ಬಂಧಿಸಿದ ವೇಣೂರು ಪೊಲೀಸರು

Suddi Udaya

ರಕ್ಷಿತ್ ಶಿವರಾಂ ಮನವಿಗೆ ಸ್ಪಂದನೆ: ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾದ್ಯಮ (ದ್ವಿಭಾಷಾ ಮಾದ್ಯಮ ) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ

Suddi Udaya

ನಿರಂಜನ ಬಾವಂತಬೆಟ್ಟುರವರಿಗೆ ನುಡಿನಮನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 20,000 ಸಹಾಯ ಧನ ವಿತರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

Suddi Udaya
error: Content is protected !!