ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ),ಕರ್ನಾಟಕ ನೇತ್ರಾವತಿ ವಲಯ ಪುತ್ತೂರು ತಾಲೂಕು ಹಾಗೂ ಕ್ಷೀರಸಂಗಮ ಹಾಲು ಉತ್ಪಾದಕರ ಸಹಕಾರಿ ಸಂಘ ಸಭಾಭವನ ಕಳಿಯ ಗೇರುಕಟ್ಟೆ ಇದರ ಸಹಯೋಗದಲ್ಲಿ ಆರೋಗ್ಯ ಪೂರ್ಣ ಜೀವನಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯು ಫೆ. 9 ರಂದು ಉದ್ಘಾಟನೆಗೊಂಡಿತು.
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ಹಾಗೂ ಕ್ಷೀರಸಂಗಮ ಸಭಾಭವನದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ದೀಪ ಬೆಳಗಿಸುವುದರೊಂದಿಗೆ ತರಗತಿಯನ್ನು ಉದ್ಘಾಟಿಸಿದರು. ಎಸ್ ಪಿ ವೈ ಎಸ್ ಎಸ್ ನ ಪುತ್ತೂರು ತಾಲೂಕಿನ ವರದಿ ಪ್ರಮುಖರಾದ ಲಕ್ಷ್ಮಿಕಾಂತ್ ಅಧ್ಯಕ್ಷತೆಯನ್ನು ವಹಿಸಿ ,ನಮ್ಮ ಜೀವನದಲ್ಲಿ ಯೋಗದ ಅಗತ್ಯದ ಬಗ್ಗೆ ತಿಳಿಸುತ್ತಾ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಕ್ಷ್ಮೀನಾರಾಯಣ ,ಪ್ರಾಂತ ಶಿಕ್ಷಣ ಪ್ರಮುಖರು, ಕೇಂದ್ರ ಸಮಿತಿ ತುಮಕೂರು ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸ್ಥಾಪನೆ, ಬೆಳೆದು ಬಂದ ಹಾದಿ ಹಾಗೂ ಧ್ಯೇಯೋದ್ದೇಶಗಳ ಪರಿಚಯ ಮಾಡಿ ಹೊಸ ಯೋಗ ಬಂಧುಗಳಿಗೆ ಶುಭ ಹಾರೈಸಿದರು.
ಕುಮಾರಿ ಬ್ರಾಹ್ಮಿ ಪ್ರಾರ್ಥಿಸಿದರು. ಸುಕೇಶ್ ಗೇರುಕಟ್ಟೆ ಸ್ವಾಗತಿಸಿ, ತಿಲಕ್ ಗುರುವಾಯನಕೆರೆ ವಂದಿಸಿದರು. ಶಶಿಕಲಾ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿನಿತ್ಯ ಯೋಗ ತರಗತಿಯು ಮುಂಜಾನೆ 5:00ರಿಂದ 6:30ವರೆಗೆ ನಡೆಯಲಿದ್ದು ಸ್ಥಳೀಯರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಯೋಗ ಶಿಕ್ಷಕಿ ಶ್ರೀಮತಿ ಪ್ರೇಮಲತಾ ತಿಳಿಸಿದರು.