ಬೆಳ್ತಂಗಡಿ: ಆರೋಗ್ಯಕ್ಕೆ ಹಾನಿಕರವಾದ ಕೃತಕ ಬಣ್ಣಗಳನ್ನು ನಿಷೇಧಿಸಿರುವ ಆರೋಗ್ಯ ಇಲಾಖೆ, ಈಗ ಆಹಾರ ತಯಾರಿಕೆಯಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ನಿಷೇಧಕ್ಕೂ ಮುಂದಾಗಿದೆ. ಆಹಾರ ತಯಾರಿಕೆ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಸಂಬಂಧ ಸರಕಾರ ಇನ್ನೆರಡು ದಿನಗಳಲ್ಲಿ ಸುತ್ತೋಲೆ ಹೊರಡಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದ 251 ಹೋಟೆಲ್ಗಳಲ್ಲಿ ಇಡ್ಲಿ ಸ್ಯಾಂಪಲ್ ಸಂಗ್ರಹಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ 52 ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಶೀಟ್ ಬಳಸಿ ಇಡ್ಲಿ ಬೇಯಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ಶೀಟ್ ಬಳಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲು ಇಲಾಖೆ ನಿರ್ಧರಿಸಿದೆ.
‘ಪ್ಲಾಸ್ಟಿಕ್ ಶೀಟ್ ಗಳು, ವಿಶೇಷವಾಗಿ ತೆಳುವಾದ ಪಾಲಿಥೀನ್ ಕವರ್ ಬಹಳ ಅಪಾಯಕಾರಿ. ಈ ಹಿಂದೆ ಹೋಟೆಲ್ಗಳಲ್ಲಿ ಇಡ್ಲಿ ತಯಾರಿಸುವ ಟ್ರೇಗೆ ಹತ್ತಿ ಬಟ್ಟೆ ಬಳಸುತ್ತಿದ್ದರು. ಹೋಟೆಲ್ಗಳಲ್ಲಿ ಬಟ್ಟೆ ಬದಲು ಪ್ಲಾಸ್ಟಿಕ್ ಶೀಟ್ ಬಳಸುತ್ತಿರುವ ವಿಚಾರ ಇತ್ತೀಚೆಗೆ ಗಮನಕ್ಕೆ ಬಂದಿತು. ಹಾಗಾಗಿ, ಇಲಾಖೆಯ ಅಧಿಕಾರಿಗಳು ವಿವಿಧೆಡೆ ತಪಾಸಣೆ ನಡೆಸಿ ಮಾದರಿ ಸಂಗ್ರಹಿಸಿದ್ದರು,” ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.
ಕಾರ್ಸಿನೋಜೆನ್ ಅಂಶ: ಪ್ಲಾಸ್ಟಿಕ್ ಹಾಳೆ ಬಳಕೆಯಿಂದ ಇಡ್ಲಿಯಲ್ಲಿ ‘ಕಾರ್ಸಿನೋಜೆನ್’ ಅಂಶ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದು ಕ್ಯಾನ್ಸರ್ಗೆ ಕಾರಣವಾಗಬಹುದು. ಯಾವುದೇ ಕಾರಣಕ್ಕೂ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಬಳಕೆಗೆ ಅವಕಾಶವಿಲ್ಲ. ಬಳಸಿದವರ ಮೇಲೆ ದಂಡ ವಿಧಿಸುವುದು ಸೇರಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಹೇಳಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆರೋಗ್ಯ ದೃಷ್ಟಿಯಿಂದ ಈಗಾಗಲೇ ಕಾಟನ್ ಕ್ಯಾಂಡಿ, ಮಂಚೂರಿಯನ್ ಮತ್ತು ಇತ್ತೀಚೆಗೆ ಕಬಾಬ್ ಗಳಲ್ಲಿ ಬಳಸಲಾಗುತ್ತಿದ್ದ ಕೃತಕ ಬಣ್ಣ, ಪಾನಿಪುರಿ ತಯಾರಿಕೆಯಲ್ಲಿ ಬಳಸುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಬಣ್ಣಗಳಿಗೆ ನಿಷೇಧ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದು.