ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ಹಿರಿಯ ನ್ಯಾಯವಾದಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಜೆ.ಕೆ ಪೌಲ್ ರವರು ಎ.8ರಂದು ನಿಧನ ಹೊಂದಿದ್ದು ಇವರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಎ.9ರಂದು ವಕೀಲರ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಅವರ ಸಹಪಾಠಿಯಾಗಿದ್ದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಜೆ.ಕೆ ಪೌಲ್ ರವರ ಕಾಲೇಜಿನ ದಿನಗಳು ಹಾಗೂ ವಕೀಲ ವೃತ್ತಿಯಲ್ಲಿ ಅವರು ತನ್ನನ್ನು ತಾನು ತೊಡಗಿಸಿದ್ದನ್ನು ಸ್ಮರಿಸಿದರು. ವಕೀಲರಾದ ಬಿ.ಕೆ ಧನಂಜಯ್ ರಾವ್, ಜೆ.ಕೆ ಪೌಲ್ ರವರ ವ್ಯಕ್ತಿತ್ವ ಹಾಗೂ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರೀತಿಯನ್ನು ವಿವರಿಸಿದರು.
ವಕೀಲರಾದ ಕೇಶವ ಪಿ ಮಾತನಾಡಿ ಕಾಲೇಜು ದಿನಗಳ ಒಡನಾಟ ಹಾಗೂ ಅವರ ನೇರ ನಿಷ್ಠುರ ನಡೆಯ ಬಗ್ಗೆ ಮಾತನಾಡಿದರು.ಹೆಚ್ಚುವರಿ ನ್ಯಾಯಾಧೀಶರಾದ ವಿಜೇಂದ್ರ ಟಿ.ಹೆಚ್ ರವರು ನ್ಯಾಯಾಲಯದಲ್ಲಿ ಜೆ.ಕೆ ಪೌಲ್ ರವರ ಭಾಗವಹಿಸುವಿಕೆಯನ್ನು ನೆನಪಿಸಿಕೊಂಡರು.ವಕೀಲರಾದ ನವೀನ್ ಬಿ.ಕೆ ಸ್ಮರಿಸುತ್ತಾ ಅವರು ಕಿರಿಯ ವಕೀಲರುಗಳಿಗೆ ನೀಡುತ್ತಿದ್ದ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಕೇಸ್ ನ ಬಗ್ಗೆ ನೀಡುತ್ತಿದ್ದ ಮಾಹಿತಿಗಳನ್ನು ನೆನಪಿಸಿಕೊಂಡರು.
ಸಭೆಯಲ್ಲಿ ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮನು ಬಿ.ಕೆ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜೇಂದ್ರ ಟಿ ಹೆಚ್, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಹಿರಿಯ ಸಮಿತಿಯ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಕಿರಿಯ ವಕೀಲರು ಭಾಗವಹಿಸಿ ಸಂತಾಪ ಸೂಚಿಸಿದರು.