ಅಳದಂಗಡಿ: ಸಂಸ್ಕಾರ ಭಾರತೀ ಬೆಳ್ತಂಗಡಿ-ಹನುಮೋತ್ಸವ ಸಮಿತಿ ಅಳದಂಗಡಿ ಆಶ್ರಯದಲ್ಲಿ ಹನುಮ ಜಯಂತಿ ಪ್ರಯುಕ್ತ ಇಂದು (ಎ.12) ಅರಮನೆ ನಗರಿ ಅಳದಂಗಡಿ ಶ್ರೀ ಸತ್ಯ ದೇವತಾ ಮೈದಾನದಲ್ಲಿ “ಹನುಮೋತ್ಸವ 2025” ಕಾರ್ಯಕ್ರಮ ಸಂಜೆ 3ರಿಂದ ಜರುಗಲಿದೆ.
ಹನುಮ ನಾಮ ಸ್ಮರಣೆ: ಬ್ರಹ್ಮಶ್ರೀ ಮಡಂತ್ಯಾರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಹನುಮ ಮಹಾಯಾಗ ನೇರವೇರಲಿದೆ. ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸಪ್ತ ಶುದ್ಧಿಗಳು, ವ್ರತಾಧಾರಿಗಳಿಂದ ಸಂಕಲ್ಪ ಪ್ರಾರ್ಥನೆ, ಸಾಮೂಹಿಕ ಮಹಾಸಂಕಲ್ಪ, ಅಗ್ನಿಜನನ, ಸಹಸ್ರ ಕದಳೀ ಹನುಮ ಯಾಗ, ಸಾಮೂಹಿಕ ಹನುಮಾನ್ ಚಾಲೀಸ ಪಠಣ, ಪ್ರಧಾನ ಹೋಮ, ಕಲಶ ಪೂಜೆ, ಮಂಡಲ ಪೂಜೆ, ಹನುಮ ಮಹಾಯಾಗ, ಪೂರ್ಣಾಹುತಿ, ಎಳ್ಳುಗಂಟು ಸಮರ್ಪಣೆ ಪೂಜೆ, ಮಹಾ ಪೂಜೆ, ಹನುಮ ಶ್ರೀರಕ್ಷೆ ಧಾರಣೆ ಮತ್ತು ಪ್ರಸಾದ ವಿತರಣೆ ಜರಗಲಿರುವುದು.
ಲಂಕಾದಹನ: ಹನುಮಯಾಗ, ರಾತ್ರಿ ಧಾರ್ಮಿಕ ಸಭೆ, ‘ಲಂಕಾದಹನ’, (ದೃಶ್ಯರೂಪಕ), ಆಕರ್ಷಕ ಸುಡುಮದ್ದು ಪ್ರದರ್ಶನ, ಅನ್ನಪ್ರಸಾದ ವಿತರಣೆ, ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ ಜರಗಲಿರುವುದು.
ಧಾರ್ಮಿಕ ಸಭೆ: ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಕರ್ನಾಟಕದ ಮೊದಲ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಧರ್ಮಸ್ಥಳ, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ ೧೦೦೮ ಶ್ರೀಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರಿಗೆ ಭಕ್ತಿಪೂರ್ವಕ ಗೌರವಾಭಿನಂದನೆ ಮಹಾಭಿವಂದ್ಯ ನಡೆಯಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ದೀಪ ಪ್ರಜ್ವಲನೆ ನೆರವೇರಿಸಲಿರುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿನಂದನಾ ನುಡಿ ಮಾಡಲಿರುವರು. ಬೆಳ್ತಂಗಡಿ ಸಂಸ್ಕಾರ ಭಾರತೀ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರು, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕರು, ಉದ್ಯಮಿ ಮೋಹನ್ ಕುಮಾರ್, ಗುರುವಾಯನಕೆರೆ ಎಕ್ಸೆಲ್ ಪಿ.ಯು ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸಹಿತ ಗಣ್ಯಾಥಿ ಗಣ್ಯರು ಭಾಗವಹಿಸಲಿರುವರು.