ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇಬ್ಬರು ಸಿಬ್ಬಂದಿಗಳು ಸಂಘದ ಲಕ್ಷಾಂತರ ಹಣ ದುರುಪಯೋಗ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರ ಬಗ್ಗೆ ಇಲಾಖೆಯ ವತಿಯಿಂದ ತನಿಖೆ ಆರಂಭಗೊಂಡಿದೆ.

ಸಂಘದ ಇಬ್ಬರು ಸಿಬ್ಬಂದಿಗಳು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ವರ್ಷದ ಆಡಿಟ್ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆನ್ನಲಾಗಿದೆ.
ಸಂಘದ ಮ್ಯಾನೇಜರ್ ನಾರಾಯಣ ಗೌಡರಿಗೆ ಸಿಬ್ಬಂದಿಗಳು ಮಾಡಿರುವ ಈ ಅವ್ಯವಹಾರದ ಯಾವುದೇ ಮಾಹಿತಿ ಇರಲಿಲ್ಲ. ವಾರ್ಷಿಕ ಲೆಕ್ಕ ಪತ್ರ ಪರಿಶೋಧನೆಯಲ್ಲಿ ಅಧ್ಯಕ್ಷ ಹೆಚ್. ಪದ್ಮ ಗೌಡರಿಗೆ ಹಣ ದುರುಪಯೋಗ ಪಡಿಸಿರುವ ಪ್ರಕರಣ ಗೊತ್ತಾಗಿದ್ದು, ಆಂತರಿಕ ತನಿಖೆ ನಡೆಸಿದಾಗ ಸಂಘದ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಸದಾಶಿವ @ ಸುಜಿತ್ ಎಂಬ ಇಬ್ಬರು ಸೇರಿಕೊಂಡು ಹಣ ದುರುಪಯೋಗ ಮಾಡಿರುವ ಆರೋಪಕ್ಕೆ ಒಳಗಾಗಿದ್ದು, ಅವರು ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಇದರಲ್ಲಿ ಅರ್ಧದಷ್ಟು ಹಣವನ್ನು ಸಂಘಕ್ಕೆ ವಾಪಾಸು ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ತನಿಖೆ ನಡೆಯುತ್ತಿದೆ: ಹೆಚ್.ಪದ್ಮಗೌಡ
ಪ್ರಕರಣದ ಬಗ್ಗೆ ಸಂಘದ ಅಧ್ಯಕ್ಷ ಹೆಚ್. ಪದ್ಮಗೌಡ ಅವರನ್ನು ‘ಸುದ್ದಿ ಉದಯ’ ಕರೆ ಮಾಡಿ ಸಂಪರ್ಕಿಸಿದಾಗ, ಮಾಹಿತಿ ನೀಡಿದ ಅಧ್ಯಕ್ಷರು ಸಂಘದಲ್ಲಿ ನಿರ್ದಿಷ್ಟವಾಗಿ ಎಷ್ಟು ಹಣ ಅವ್ಯವಹಾರವಾಗಿದೆ ಎಂದು ಗೊತ್ತಾಗಿಲ್ಲ, ಇದರ ತನಿಖೆ ನಡೆಯುತ್ತಿದ್ದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಬ್ಬರ್ ವ್ಯವಹಾರದಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಇಬ್ಬರು ಸಿಬ್ಬಂದಿಗಳು ಹಣ ದುರುಪಯೋಗ ಮಾಡಿದ್ದು, ಇದನ್ನು ಒಪ್ಪಿಕೊಂಡಿದ್ದಾರೆ ಕೂಡಲೇ ನಷ್ಟ ಭರ್ತಿ ಮಾಡುತ್ತೇವೆ ಎಂದು ಸ್ವಷ್ಟಪಡಿಸಿದ್ದಾರೆ.