ಬೆಳ್ತಂಗಡಿ: ಬೆಳ್ತಂಗಡಿ ಪತ್ರಕರ್ತರ ಸಂಘವು ಕುತ್ಲೂರು ಗ್ರಾಮದಲ್ಲಿ ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮ ಸಂಘಟಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿದೆ. ಸಂಘದ ಎಲ್ಲಾ ಕಾರ್ಯಗಳಿಗೆ ವಾರ್ತಾ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಹೇಳಿದರು.
ಅವರು ಮೇ 26 ರಂದು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬೆಳ್ತಂಗಡಿ ತಾಲೂಕು ಜಿಲ್ಲೆಯ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದೆ. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಪತ್ರಕರ್ತರ ಗ್ರಾಮ ವಾಸ್ತವ್ಯವನ್ನು ಕುತ್ಲೂರು ಗ್ರಾಮದಲ್ಲಿ ಮಾಡಿ ಇತರಿಗೆ ಮಾದರಿಯಾಗಿದೆ. ಈ ಗ್ರಾಮವಾಸ್ತವ್ಯ ರಾಜ್ಯಮಟ್ಟದಲ್ಲೂ ಶ್ಲಾಘನೆಗೆ ಕಾರಣವಾಗಿದೆ. ಸಂಘಕ್ಕೆ ವಾರ್ತಾ ಇಲಾಖೆಯಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ನೀಡಲು ಪ್ರಯತ್ನಿಸುವುದಾಗಿ ಖಾದರ್ ಷಾ ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಮುಂಚೂಣಿಯಲ್ಲಿರುವ ಸಂಘವಾಗಿದ್ದು, ಸೊಸೈಟಿಗೆ ಅತೀ ಹೆಚ್ಚು ಷೇರುಗಳನ್ನು ನೀಡಿದ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲೆಯ ಎಲ್ಲಾ ಪತ್ರಕರ್ತರ ಸಂಘ ಸ್ವಂತ ಕಟ್ಟಡವನ್ನು ಹೊಂದಿದ್ದು, ಬೆಳ್ತಂಗಡಿ ಸಂಘವು ಸ್ವಂತ ಕಟ್ಟಡ ಹೊಂದು ಜಿಲ್ಲಾ ಸಂಘದ ಮೂಲಕ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು. ಜಿಲ್ಲಾ ಪತ್ರಕರ್ತರ ಸಂಘವು ಸುವರ್ಣ ಮಹೋತ್ಸವದ ಸಂಭ್ರದಲ್ಲಿದ್ದು, ಮುಂದಿನ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು. ತಾಲೂಕು ಸಂಘದ ಕಾರ್ಯದರ್ಶಿ ತುಕರಾಮ್ ಬಿ. ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಧನ್ಯವಾದವಿತ್ತರು. ಸಂಘದ ಸದಸ್ಯರಾದ ಬಿ.ಎಸ್ ಕುಲಾಲ್, ಮನೋಹರ ಬಳಂಜ, ಚೈತ್ರೇಶ್ ಇಳಂತಿಲ, ದೀಪಕ್ ಅಠವಳೆ, ಅಚುಶ್ರೀ ಬಾಂಗೇರು, ಶಿಬಿ ಧರ್ಮಸ್ಥಳ ಉಪಸ್ಥಿತರಿದ್ದರು.