ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಎಲ್ಲಾ ಭಜಕರನ್ನು ಒಂದೇಡೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಜಕೆರೆ ಗೊಬ್ಬು ನಡೆಯಲಿದೆ. ದೇವ ಭಕ್ತಿಯ ಜೊತೆಗೆ ದೇಶ ಭಕ್ತಿಯ ಜಾಗೃತಿ ಮೂಡಿಸುವ ಮೂಲಕ ಸಂಘಟನಾತ್ಮಕವಾಗಿ ಭಜಕರನ್ನು ಒಗ್ಗೂಡಿಸುವ ಕಾರ್ಯ ಜರುಗಲಿದೆ ಎಂದು ಬೆಳ್ತಂಗಡಿ ಭಕ್ತಿಹೆಜ್ಜೆ ಬಳಗದ ಸಂಚಾಲಕ ಹರೀಶ್ ನೆರಿಯ ಹೇಳಿದರು.
ಜೂ.5ರಂದು ಬೆಳ್ತಂಗಡಿ ವಿವೇಕಾನಂದ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ಭಕ್ತಿಹೆಜ್ಜೆ ಬಳಗ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿ, ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಶೀರ್ವಾದಗಳೊಂದಿಗೆ, ಶರತ್ಕೃಷ್ಣ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಭಜಕೆರೆ ಗೊಬ್ಬು, ಭಜಕ ಸಮ್ಮಿಳನ ಮತ್ತು ಪ್ರತಿಭಾ ಪುರಸ್ಕಾರ ಜೂ.8ರಂದು ಉಜಿರೆ ಶಾರದಾ ಮಂಟಪದಲ್ಲಿ ಬೆಳಗ್ಗೆ 8.30ಕ್ಕೆ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಎಲ್ಲಾ ಭಜಕರನ್ನು ಸಂಘಟನಾ ವ್ಯಾಪ್ತಿಯಲ್ಲಿ ಜೊತೆ ಸೇರಿಸುವ ಮೊದಲ ಪ್ರಯತ್ನ ಜೊತೆಗೆ ತಾಲೂಕಿನ ಎಸ್ಎಸ್ಎಲ್ಸಿ, ಹಾಗೂ ಪಿಯುಸಿಯಲ್ಲಿ 85%ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿರುವ 100ಕ್ಕೂ ಅಧಿಕ ಭಜಕ ವಿದ್ಯಾರ್ಥಿಗಳನ್ನು ಹಾಗೂ ಪ್ರತಿ ಭಜನಾ ತಂಡದ ಪ್ರಮುಖ ಸಂಘಟಕರನ್ನು ಗುರುತಿಸಿ ಗೌರವಿಸಲಾಗುವುದು. ಬೆಳಗ್ಗೆ ವಿಷ್ಣು ಸಹಸ್ರನಾಮ ಪಠಣ, ಶಾರದಾ ಮಂಟಪಕ್ಕೆ ಪಥಸಂಚಲನ ಮೂಲಕ ಭಜಕರ ಆಗಮನ, ಭಜನಾ ಅಂತ್ಯಕ್ಷರಿ, ಪುರಾಣ ರಸಪ್ರಶ್ನೆ ಸಹಿತ ವಿಭಾಗವಾರು ಮನೋರಂಜನಾತ್ಮಕ ಸ್ಪರ್ಧೆಗಳು ನಡೆಯಲಿದ್ದು ಗುಂಪು ಸ್ಪರ್ಧೆಗಳಿಗೆ ಸ್ಥಳದಲ್ಲೆ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದರು.
ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯ ಸಮಾರಂಭ ಉದ್ಘಾಟಿಸುವರು. ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಹಾಗೂ ಪೆರ್ಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಗೌರವಾಧ್ಯಕ್ಷ ತ್ಯಾಂಪಣ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಲಿರುವರು.
ಶಾಸಕ ಹರೀಶ್ ಪೂಂಜ, ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿ.ಪ. ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಕಿರಣ್ಚಂದ್ರ ಡಿ. ಪುಷ್ಪಗಿರಿ ಸಹಿತ ಮತ್ತಿತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಬಳಗದ ಸಂಚಾಲಕ ಹರೀಶ್ ನೆರಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಸದಸ್ಯರಾದ ದಿನೇಶ್ ಗೌಡ, ಗೀತಾ ರಾಮಣ್ಣ ಗೌಡ ಹಾಗೂ ಸಚಿನ್ ಉಪಸ್ಥಿತರಿದ್ದರು.