ಬೆಳ್ತಂಗಡಿ: ಕಳೆದ 7, 8 ವರುಷ ದಿಂದ ಬೆಳ್ತಂಗಡಿಯ ಕೃಷಿಕರಿಗೆ ಅಕ್ರಮ ಸಕ್ರಮ ಭೂ ಮಂಜೂರಾತಿಯ ಪ್ರಕಾರ ಯಾವುದೇ ಹಕ್ಕು ಪತ್ರಗಳನ್ನು ನೀಡದೆ ಸತಾಯಿಸಲಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ 70 ಸಾವಿರ ಅಕ್ರಮ ಸಕ್ರಮ ಭೂ ಮಂಜೂರಾತಿ ಅರ್ಜಿದಾರರ ಬದುಕು ಬೀದಿಗೆ ಬಂದಿದೆ ಎಂದು ಎಂಡೋ ಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ಕೊಕ್ಕಡ ತಿಳಿಸಿದರು.
ಅವರು ಜೂ. 10 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳ್ತಂಗಡಿಯ ಕೃಷಿಕರಿಗೆ ಅಕ್ರಮ ಸಕ್ರಮ ಭೂ ಮಂಜೂರಾತಿಯ ಪ್ರಕಾರ ಯಾವುದೇ ಹಕ್ಕು ಪತ್ರಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದರು ಸಿಟ್ಟಿಂಗ್ ಗಳು ಮರಿಚಿಕೆಯಾಗಿದೆ. ಎಲ್ಲಾ ಕಡತಗಳನ್ನು 6 ತಿಂಗಳ ಒಳಗಾಗಿ ವಿಲೇವಾರಿ ಮಾಡುವುದಾಗಿ ಜೂ. 17ರ ಒಳಗೆ ನಮಗೆ ತಹಶೀಲ್ದಾರರು ಲಿಖಿತ ರೂಪದಲ್ಲಿ ತಿಳಿಸಬೇಕಾಗಿ ಮನವಿ ಸಲ್ಲಿಸಿರುತ್ತೇವೆ. ಇಲ್ಲವಾದಲ್ಲಿ ಜೂ. 26 ರಂದು ತಾಲೂಕು ಕಛೇರಿ ಎದುರು ಬೃಹತ್ ಹಕ್ಕೋತ್ತಾಯ ಸಭೆಯನ್ನು ನಡೆಸುವುದಾಗಿ ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಸಮಾಲೋಚನ ಸಭೆ ನಡೆಸಿ ಕೃಷಿಕರು ಸ್ವಯಂ ಪ್ರೇರಿತರಾಗಿ ನಿರ್ಣಯಿಸಿರುತ್ತಾರೆ ಎಂದು ತಿಳಿಸಿದರು.
ಸರ್ವೆ ಆ್ಯಪ್ ಕೃಷಿಕರಿಗೆ ಮರಣ ಶಾಸನ:
ಅಧಿಕಾರಿಗಳು ಭೂ ಮಂಜೂರಾತಿಗಾಗಿ ಸರ್ವೆ ನಡೆಸಲು ಆ್ಯಪ್ ಒಂದನ್ನು ರಚಿಸಿದ್ದು ಇದು ಕೃಷಿಕರಿಗೆ ಮರಣ ಶಾಸನವಾಗಿದೆ. ಅದರಲ್ಲಿ ಅರ್ಜಿದಾರನು ಅರ್ಜಿ ಸಲ್ಲಿಸುವ ವೇಳೆ ನಮೂದಿಸಿದ ಸರ್ವೆ ನಂಬ್ರವನ್ನು ಬಿಟ್ಟು ಬೇರೆ ಸರ್ವೆ ನಂಬ್ರವನ್ನು ಅಳತೆ ಮಾಡುವುದಿಲ್ಲ ಅರ್ಜಿ ಸ್ವೀಕರಿಸಿದ ಅಧಿಕಾರಿಯ ತಪ್ಪಿನಿಂದ ಅಥವಾ ಅರ್ಜಿದಾರ ಕೃಷಿಕನ ಅಜ್ಞಾನದ ಕಾರಣದಿಂದ ಸರ್ವೆ ನಂಬರ್ ಗಳು ತಪ್ಪಾಗಿರಬಹುದು, ಆ ಕಾರಣದಿಂದಲೆ ಅರ್ಜಿಯನ್ನು ವಜಾ ಮಾಡುತ್ತಿರುವುದು ಕೃಷಿಕರಿಗೆ ಸಮಸ್ಯೆಯಾಗಿದೆ. ಆದುದರಿಂದ ಈ ನಿಯಮವನ್ನು ಬದಲಾಯಿಸಲೆಬೇಕು ಎಂದು ಒತ್ತಾಯಿಸಿದರು.
ಮಕ್ಕಳ ಪ್ರಾಯದ ಕಾರಣಕ್ಕೆ ಅರ್ಜಿ ವಜಾ ಸರಿಯಲ್ಲ:
ಸರ್ಕಾರ 2018 ರಲ್ಲಿ ಅರ್ಜಿ ಸ್ವೀಕರಿಸುವ ವೇಳೆಗೆ ಅರ್ಜಿದಾರನ ಪ್ರಾಯ ನಮೂದಾಗಿರುವ ಅರ್ಜಿದಾರನ ಆಧಾರ್ ಪ್ರತಿಯನ್ನು ಪಡೆದು 100ರೂ. ಶುಲ್ಕವನ್ನು ಸ್ವೀಕರಿಸಿ ಪ್ರಸ್ತುತ 01-01-1984ರ ಮೊದಲು ಜನಿಸಿದ ಕೃಷಿಕನಿಗೆ ಮಾತ್ರ ಭೂ ಮಂಜೂರಾತಿ ಮಾಡುವುದಾಗಿ ಅಥವಾ ಸರ್ವೆ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೃಷಿಕರು ಯಾರು ಹೊಸತಾಗಿ ಒತ್ತುವರಿಯನ್ನಾಗಿ ಮಾಡಿರುವುದಿಲ್ಲ ತಮ್ಮ ಅಜ್ಜ ಮುತ್ತಜ್ಜ ಕಾಲದಿಂದ ಕುಟುಂಬದ ಸ್ವಾಧೀನದಲ್ಲಿರುವ ಜಮೀನನ್ನು ತಂದೆ ಬಾಯಿ ಮಾತಿನಲ್ಲಿ ವಿಭಾಗ ಮಾಡಿ ಅನುಭವಿಸುತ್ತಿದ್ದಾರೆ ಪ್ರಸ್ತುತ ಮಕ್ಕಳ ಪ್ರಾಯದ ಕಾರಣಕ್ಕೆ ಅರ್ಜಿಯನ್ನು ವಜಾ ಮಾಡಿದರೆ. ಆ ಅರ್ಜಿದಾರ ಎಲ್ಲಿ ವಾಸ್ತವ್ಯ ಮತ್ತು ಕೃಷಿಯನ್ನು ಮಾಡಬೇಕು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನ ಪತಿನಿಧಿಗಳು ಸ್ಪಷ್ಟಿಕರಣ ನೀಡಬೇಕು ಎಂದು ಹೇಳಿದರು.
94ಸಿ ಮನೆ ನಿವೇಶನ ಅರ್ಜಿ ತಾಲೂಕು ಕಛೇರಿಯಲ್ಲಿ ನಾಪತ್ತೆ:
ನಾವು ಈ ಕುರಿತು ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಸಮಾಲೋಚನೆ ನಡೆಸಿದಾಗ 94ಸಿ ಮನೆ ನಿವೇಶನ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಕಂದಾಯ ನಿರೀಕ್ಷಕರ ವರದಿಯು ಆಗಿದ್ದು ತಾಲೂಕು ಕಛೇರಿಯಲ್ಲಿ ವಿಚಾರಿಸಿದಾಗ ನಮ್ಮ ಕಡತಗಳು ಕಛೇರಿಯಲ್ಲಿ ಇರುವುದಿಲ್ಲ ಎಂದು ಸತಾಯಿಸುತ್ತಿದ್ದಾರೆ ಎಂದು ದೂರಿದರು. ತಾಲೂಕು ಕಛೇರಿಯ ಅಧಿಕಾರಿಗಳು ಮನೆ ನಿವೇಶನದ ಮಂಜುರಾತಿ ಕಡತಗಳನ್ನು ಮರೆಮಾಚುತ್ತಿದ್ದಾರೆ ಎಂಬ ಅನುಮಾನ ನಮ್ಮನ್ನು ಕಾಡುತಿದೆ. ಮತ್ತು ತಾಲೂಕು ಕಛೇರಿಯಲ್ಲಿ ಮಧ್ಯವರ್ತಿಗಳನ್ನು ಹೊರತುಪಡಿಸಿ ಅರ್ಜಿದಾರರಿಗೆ ಪ್ರವೇಶನೆ ಇಲ್ಲ ಎಂಬ ಭಾವನೆ ನಮಗೆ ಮೂಡುತ್ತಿದೆ ಎಂದರು.
ಪೋಡಿ ಮುಕ್ತ ತಾಲೂಕಾಗಿ ಘೋಷಿಸಿ:
ಅದೆಷ್ಟು ವರ್ಷಗಳಿಂದ ತಾಲೂಕನ್ನು ಪೋಡಿ ಮುಕ್ತ ತಾಲೂಕಾಗಿ ಘೋಷಿಸುವುದಾಗಿ ಪತ್ರಿಕೆಗಳಲ್ಲಿ ಹೇಳುತ್ತಲೇ ಬಂದಿದ್ದಾರೆ ಆದರೆ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಇದರಿಂದಾಗಿ ವಿಭಾಗ ಪತ್ರ ಮಾಡಿಸಿಲಾಗದೆ ಮಾರಾಟ ಮಾಡಲಾಗದೆ ಮನೆ ಕಟ್ಟಲಾಗದೆ ನರಳುತ್ತಿದ್ದಾರೆ ಇದರಿಂದಾಗಿ ಸರ್ಕಾರಕ್ಕೆ ಅಪಾರ ನಷ್ಟವಾಗುತ್ತಿದ್ದರು ಸರ್ಕಾರ ನಿಷ್ಕ್ರಿಯವಾಗಿರುವುದು ಆಶ್ಚರ್ಯಕರ. 70 ಸಾವಿರ ಅರ್ಜಿದಾರರೆಂದರು 1,40,000 ಮತದಾರರು ರಾಜಕೀಯ ಪಕ್ಷಗಲೇ ಎಚ್ಚೆತ್ತುಕೊಳ್ಳಿ. ಕೃಷಿಕರ ಹೋರಾಟವನ್ನು ಹತ್ತಿಕ್ಕುವಲ್ಲಿ ನೀವು ಸಮರ್ಥರಿದ್ದೀರಿ ಆದರೆ ಕೃಷಿಕರ ನೋವು ಮತ್ತು ಅಸಮಾಧಾನಗಳನ್ನು ಎಷ್ಟು ದಿನ ನೀವು ತಡೆ ಹಿಡಿಯುವಿರಿ ಮತ್ತು ಕೃಷಿಕರು ಎಷ್ಟು ದಿನ ಸಹಿಸಿಕೊಂಡರು ಅಕ್ರಮ ಸಕ್ರಮ ಸಮಿತಿಯಲ್ಲಿ ಎರಡು ಪಕ್ಷಗಳ ಸದಸ್ಯರಿರುವಾಗ ಈ ಮೌನ ಯಾಕೆ, ಕೃಷಿಕರ ಆಕ್ರೋಶ ಕಟ್ಟೆ ಹೊಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಕೃಷಿಕರಿಗೆ ನ್ಯಾಯ ನೀಡಿ ಎಂದು ಆಗ್ರಹಿಸಿದರು.
ಹಕ್ಕೋತ್ತಾಯ ಸಭೆ-ಪತ್ರ ಚಳುವಳಿ:
ಜೂನ್ 26 ರಂದು ಅಸಂಘಟಿತ ಕೃಷಿಕರು ಸ್ವಯಂ ಪ್ರೇರಿತರಾಗಿ ನಡೆಸುವ ಹಕ್ಕೊತ್ತಾಯ ಸಭೆಯನ್ನು ಎಲ್ಲಾ ಪಕ್ಷಗಳು ಸಂಘಟನೆಗಳು ಮತ್ತು ಬುದ್ಧಿ ಜೀವಿಗಳು ಮತ್ತು ಮಾಧ್ಯಮಗಳು ಬೆಂಬಲಿಸಬೇಕಾಗಿ ಕೋರುತ್ತೇವೆ ಮತ್ತು ಮೇಲೆ ತಿಳಿಸಿದ ಆ್ಯಪ್ ಮತ್ತು ಪ್ರಾಯದ ವಿಚಾರಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಆಗಿರುವ ಕೃಷ್ಣ ಬೈರೆ ಗೌಡರಿಗೆ ಜೂ.17 ರಿಂದ ಪತ್ರ ಚಳುವಳಿಯನ್ನು ನಡೆಸಲಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿನ್ನಪ್ಪ ಗೌಡ, ಆನಂದ ಪಟ್ರಮೆ, ಬಾಲಕೃಷ್ಣ ಕೊಕ್ಕಡ, ಬಾಲಕೃಷ್ಣ ಬಂದರು ಉಪಸ್ಥಿತರಿದ್ದರು.