ಬೆಳ್ತಂಗಡಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಮುಂಡಾಜೆಯ ಕವಯತ್ರಿ ಪದ್ಮಾ ಪಿ.ಬೇಡೇಕರ್ ಅವರ ಕವನ ಸಂಕಲನ ದರ್ಪಣ ಬಿಡುಗಡೆ ಕಾರ್ಯಕ್ರಮ ಮುಂಡಾಜೆ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಜೂ. 19 ನಡೆಯಿತು.

ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್
ಕಳೆದ ಮೂರು ವರ್ಷಗಳಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ನೂರಕ್ಕಿಂತ ಅಧಿಕ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಮೂಲಕ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿರುವ ಜತೆ ಅನೇಕ ಎಲೆಮರೆಯ ಕಾಯಿಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳಿರುವಲ್ಲಿ ಸಾಹಿತ್ಯ ಪರಿಷತ್ತು ಹೋಗುವ ಧ್ಯೇಯ ಹೊಂದಿದ್ದು ವಿದ್ಯಾರ್ಥಿಗಳಿಗೆ ಸಾಹಿತ್ಯ ಅಭಿರುಚಿ ಮೂಡಿಸುವ ಯತ್ನ ನಡೆದಿದೆ.ಎಲ್ಲಾ ರಂಗಗಳಲ್ಲೂ ಹಿರಿಯರ ಅನುಭವ,ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಅಗತ್ಯ ಎಂದರು.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಮಾತನಾಡಿ ಸಾಹಿತ್ಯ ಸಮಾಜಕ್ಕೆ ಮಾರ್ಗದರ್ಶನ ನೀಡುವುದಲ್ಲದೆ ನೆಮ್ಮದಿ,ಆಧುನಿಕತೆಗೆ ಕಾರಣವಾಗಿದೆ.
ಮುಂಡಾಜೆ ಅನೇಕ ಕಲಾವಿದರ ತವರೂರು.ಇಲ್ಲಿಯೂ 3ಬಾರಿ ಸಾಹಿತ್ಯ ಸಮ್ಮೇಳನ ನಡೆದಿರುವುದು ಹೆಮ್ಮೆಯ ವಿಚಾರ.
ತಾಲೂಕು ಘಟಕದ ಅಧ್ಯಕ್ಷ ಯದುಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಬದುಕಿಗೆ,ಮಾನಸಿಕ ಸಂತಸಕ್ಕೆ ಮುಖ್ಯ.ಪುಸ್ತಕಗಳು ಸಮಾಜದ ಪ್ರತಿಬಿಂಬ ಎಂದರು.
ಎಸ್ ಡಿಎಂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ದಿವಾ ಕೊಕ್ಕಡ,ಮುಂಡಾಜೆ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಉಪಸ್ಥಿತರಿದ್ದರು.
ಕವಯತ್ರಿ ಪದ್ಮಾ ಪಿ. ಬೇಡಕರ್ ಅವರನ್ನು ಗೌರವಿಸಲಾಯಿತು. ಉಪನ್ಯಾಸಕಿ ಸ್ಮಿತಾ ಬೇಡೇಕರ್ ಕಾರ್ಯಕ್ರಮ ನಿರೂಪಿಸಿದರು.
ಶಿವಾನಿ ಸ್ವಾಗತಿಸಿದರು. ಶರ್ವಾಣಿ ವಂದಿಸಿದರು.











