ಮುಂಡಾಜೆ : ಕ್ರೈಸ್ಟ್ ಅಕಾಡೆಮಿ ಮುಂಡಾಜೆಯಲ್ಲಿ ಪೋಷಕರ ಸಭೆಯನ್ನು ಶಾಲಾ ಪ್ರಾಂಶುಪಾಲರ ಅದ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನಪ್ರಿಯ ವಕೀಲರಾಗಿರುವ ಬಿ.ಕೆ ಧನಂಜಯ ರಾವ್ ರವರು ಹೆತ್ತವರಿಗೆ ನಾವು ಮಕ್ಕಳ ಮುಂದೆ ಯಾವ ರೀತಿಯ ನಡೆದುಕೊಳ್ಳಬೇಕು ಹಾಗೂ ಮಕ್ಕಳನ್ನು ಈ ಆಧುನಿಕ ಯುಗದಲ್ಲಿ ಯಾವ ರೀತಿಯ ಬೆಳೆಸಬೇಕು ಹಾಗೂ ನಮ್ಮ ಮಕ್ಕಳನ್ನು ಪೋಷಕರು ಎಂದು ಇನ್ನೊಬ್ಬರೊಂದಿಗೆ ತುಲನೆ ಮಾಡಬಾರದು ಬದಲಾಗಿ ಹೆತ್ತವರು ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ಅರ್ಥಯಿಸಿಕೊಂಡು ಅವರ ಇಚ್ಛಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೆರೇಪಿಸಬೇಕು ಎಂಬುದಾಗಿ ತಿಳಿಸಿದರು. ಎಲ್ಲದಕ್ಕೂ ಮಿಗಿಲಾಗಿ ಹೆತ್ತವರು ತಮ್ಮ ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಬೇಕು ಎಂಬ ಸಲಹೆಯನ್ನು ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಫಾ| ಜಾರ್ಜ್ ಪಿ.ಕೆ , ರವರು ಶಾಲೆಯ ನಿಯಮಗಳನ್ನು ಹೆತ್ತವರಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಅಬಾಕಸ್, ಸ್ಕೇಟಿಂಗ್, ಫಿಟ್ ನೆಸ್ ಪಾರ್ಕ್ ನಂತಹ ಶಿಕ್ಷಣಕ್ಕೆ ಸಂಬಂಧಿತ ತರಗತಿಗಳನ್ನು ಪ್ರಾರಂಭಿಸುವುದಾಗಿಯೂ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ CET, NEET, JEE ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿರುವುದಾಗಿಯೂ ಹೇಳಿದರು.
ಸಭೆಯಲ್ಲಿ ಉಮೇಶ್ ಗೌಡ ಅವರನ್ನು ಪೋಷಕರ ಹಾಗೂ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಹಾಗೂ ಶಾಲಾ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಶಾಲಾ ಸಂಚಾಲಕ ಸೆಬಾಸ್ಟಿನ್ ಪಿ ಸಿ ಹಾಗೂ ಫಾ. ಅಬ್ರಹಾಂ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಪ್ರಿಯ ಸ್ವಾಗತಿಸಿ, ಶಿಕ್ಷಕಿ ಮಾಯ ವಂದಿಸಿದರು. ಶಿಕ್ಷಕಿ ಅನಿಲ ಕಾರ್ಯಕ್ರಮವನ್ನು ನಿರೂಪಿಸಿದರು.











