ಉಜಿರೆ: ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ಆ.16 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆಯ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನ ಅಧ್ಯಯನಕ್ಕಾಗಿ ಭೇಟಿ ನೀಡಿದ್ದರು.

ಯಕ್ಷ ಗುರು ಅರುಣ್ ಕುಮಾರ್ ಧರ್ಮಸ್ಥಳ ನೇತೃತ್ವದಲ್ಲಿ ವಿದ್ಯಾರ್ಥಿ ತಂಡದ ನಾಯಕನಾದ ಅಮೋಘ ಶಂಕರ ಮತ್ತು ತಂಡದ ನಾಯಕಿಯಾದ ಮನಸ್ವಿಯವರ ನಾಯಕತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಷ್ಠಾನದ ಮ್ಯೂಸಿಯಂ ವೀಕ್ಷಿಸಿ ಮಾಹಿತಿಯನ್ನು ಪಡೆದರು.
ಸಂಪನ್ಮೂಲ ವ್ಯಕ್ತಿಯಾಗಿ ತೆಂಕತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ರವರು ವಿದ್ಯಾರ್ಥಿಗಳೊಂದಿಗೆ ಉಪನ್ಯಾಸ, ಸಂವಾದ ಮತ್ತು ಯಕ್ಷಗಾನದ ಕುರಿತಾದ ಪ್ರಾತ್ಯಕ್ಷಿಕೆ ಮೂಲಕ ವಿವರಣೆಯನ್ನು ನೀಡಿದರು. ಹಿಂದಿನ ಕಾಲದ ಕೀರ್ತಿಶೇಷರಾದ ಪ್ರಾರ್ತಿಸುಬ್ಬರಿಂದ ಮೊದಲ್ಗೊಂಡು ಕಾಸರಗೋಡಿನ ವೆಂಕಪ್ಪಯ್ಯನವರು ನೀಡಿದ ಕೊಡುಗೆಯನ್ನು ವಿವರಿಸಿದರು.
ವಿದ್ಯಾರ್ಥಿಗಳಾದ ಅಮೋಘ ಶಂಕರ, ಮನಸ್ವಿ, ಸೌರವ್ ಶೆಟ್ಟಿ, ಅನನ್ಯ , ಯಕ್ಷಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ ಮತ್ತು ರಂಗ ತರಬೇತುದಾರರಾದ ಯಶವಂತ್ ಬೆಳ್ತಂಗಡಿ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಸಿರಿಬಾಗಿಲು ವೆಂಕಪ್ಪಯ್ಯನವರ ಕೊಡುಗೆ ಹಾಗೂ ಪ್ರತಿಷ್ಠಾನ ಬೆಳೆದು ಬಂದ ರೀತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಜಗದೀಶ್ ಕೆ. ಕೂಡ್ಲು ಸ್ವಾಗತಿಸಿ ವಂದಿಸಿದರು .











