ಶಿಶಿಲ: ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ ಇವರ ಆಶ್ರಯದಲ್ಲಿ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಜರುಗಿತು.
ಬೆಳಿಗ್ಗೆ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಕುಕ್ಕೆಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಪುರುಷರಿಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.

ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ವಾಲ್ಮೀಕಿ ಆಶ್ರಮ ಶಾಲೆ ,ಹೇವಾಜೆ ಕಿ.ಪ್ರಾ.ಶಾಲೆ ಹಿ.ಪ್ರಾ.ಶಾಲೆ ಶಿಶಿಲ ಹಾಗೂ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಭರತನಾಟ್ಯ ಕಲಾವಿದೆ ಕು|| ವಿಧಾತ್ರಿ ಕೋಣೆಮನೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಿತಿನ್ ಬೈರಕಟ್ಟ ಇವರಿಂದ ಉರಗ ಮಾಹಿತಿ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಹರೀಶ್ ಕೊಳಂಬೆ ವಹಿಸಿದ್ದರು. ಅರಣ್ಯ ಮಿತ್ರ ಪ್ರಶಸ್ತಿ ಪುರಸ್ಕೃತ ಸಚಿನ್ ಭಿಡೆ ಮುಂಡಾಜೆ, ಉದ್ಯಮಿ ದಯಾನಂದ ಶೆಟ್ಟಿ ಹಾಗೂ ನಾಟಿವೈದ್ಯೆ ಮುತ್ತಮ್ ಇವರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಿನ್ ಡಿ., ಕೊಕ್ಕಡ ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ತೇಜಸ್ವಿ ಹಾಗೂ ಉಮೇಶ್ ಕುಕ್ಕೆಶ್ರೀ ಉಪಸ್ಥಿತರಿದ್ದರು. ನಿತಿನ್ ಬೈರಕಟ್ಟ ಸ್ವಾಗತಿಸಿದರು. ಸುಂದರ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಜಿತ್ ಹಾಗೂ ಶರತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶರತ್, ಭರತ್ ವಂದಿಸಿದರು. ಸತೀಶ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸದಸ್ಯರು ಸಹಕರಿಸಿದರು.











