22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾಡಿನಾದ್ಯಂತ ನವರಾತ್ರಿ ಸಂಭ್ರಮ; ಕರಾವಳಿಯಲ್ಲಿ ಮಾರ್ನೆಮಿ ವೇಷಗಳ ಸದ್ದು ಆರಂಭ

ಬೆಳ್ತಂಗಡಿ: ನವರಾತ್ರಿ ಹಬ್ಬವು ಸೆ.22ರಂದು ಪ್ರಾರಂಭಗೊಂಡು ಅ.1ರವರೆಗೆ ನಡೆಯಲಿದ್ದು, ನಾಡಿನ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಸಂಭ್ರಮ ಕಳೆ ಕಟ್ಟಿದೆ.

ಈ ಸಂದರ್ಭದಲ್ಲಿ ದುರ್ಗೆಯನ್ನು ಒಂದೊಂದು ದಿನ ಒಂದೊಂದು ರೂಪದಲ್ಲಿ ಪೂಜಿಸಲಾಗುತ್ತದೆ. ಈ ಪ್ರಯುಕ್ತ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನವರಾತ್ರಿ ಆಚರಣೆಗೆ ಬಹಳ ಮಹತ್ವವಿದ್ದು, ಈ ದಿನಗಳಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಅಶ್ವಯುಜ ಮಾಸದಲ್ಲಿ ದುರ್ಗಮಾತೆಯು 9 ದಿನಗಳ ಕಾಲ ಮಹಿಷಾಸುರನೊಡನೆ ಹೋರಾಡಿ, ಹತ್ತನೇ ದಿನ ಅಂದರೆ ವಿಜಯದಶಮಿಯ ದಿನ ದುಷ್ಟ ಮಹಿಷಾಸುರನನ್ನು ಸಂಹಾರ ಮಾಡಿದಳು ಎಂಬ ಪ್ರತೀತಿ ಇದೆ.

ನವದುರ್ಗೆಯರ ಪೂಜೆ: ಸೆ.22 ಸೋಮವಾರ: ಶೈಲಪುತ್ರಿ ಸೆ.23 ಮಂಗಳವಾರ: ಬ್ರಹ್ಮಚಾರಿಣಿ ಸೆ.24 ಬುಧವಾರ: ಚಂದ್ರಘಂಟಾ ಸೆ.25 ಗುರುವಾರ: ಕೂಷ್ಮಾಂಡ ಸೆ.26 ಶುಕ್ರವಾರ: ಸ್ಕಂದಮಾತ ಸೆ.27 ಶನಿವಾರ: ಕಾತ್ಯಾಯನಿ ಸೆ.28 ಆದಿತ್ಯವಾರ: ಕಾಳರಾತ್ರಿ ಸೆ.29 ಸೋಮವಾರ: ಮಹಾಗೌರಿ ಸೆ.30 ಮಂಗಳವಾರ: ಸಿದ್ದಿಧಾತ್ರಿ ಅ.01 ಬುಧವಾರ: ವಿಜಯದಶಮಿ

ನಾಡಿನಾದ್ಯಂತ ನವರಾತ್ರಿ ಹಬ್ಬವನ್ನು ಭಕ್ತಿ-ಭಾವ, ಸಡಗರದಿಂದ ಆಚರಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ದುರ್ಗಾಮಾತೆಯನ್ನು ವಿವಿಧ ರೂಪಗಳಲ್ಲಿ ಆರಾಧಿಸುವುದರೊಂದಿಗೆ, ಈ ಸಮಯದಲ್ಲಿ ಉಪವಾಸ, ವ್ರತಾಚರಣೆಗಳ ಮೂಲಕ ದೇವಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ದೇವಿಯನ್ನು ಆರಾಧಿಸುವುದರಿಂದ ನಮ್ಮೆಲ್ಲಾ ಕಷ್ಟಗಳು ಕಳೆದು ಜೀವನದಲ್ಲಿ ಸುಖ, ಸಮೃದ್ಧಿ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಶರನ್ನವರಾತ್ರಿ ಎಂದಾಗ ಕರಾವಳಿಯಲ್ಲಿ ನೆನಪಾಗುವುದು ಮಾರ್ನೆಮಿ ವೇಷಗಳು. ದಸರದ ಸಂದರ್ಭದಲ್ಲಿ ಮೈಸೂರಿನಲ್ಲಿ ಜಂಬೂ ಸವಾರಿಯೇ ವಿಶೇಷವಾದರೆ, ತುಳುನಾಡಿನಲ್ಲಿ ಮಾರ್ನೆಮಿ ವೇಷಗಳದ್ದೆ ಸದ್ದು ಗದ್ದಲ. “ಮಾರ್ನೆಮಿ ವೇಷ ಬತ್ತಂಡ್” ಎಂದು ಜನರೆಲ್ಲ ತಲೆಯೆತ್ತಿ ನೋಡತೊಡಗುತ್ತಾರೆ. ಹಬ್ಬದ ಸಡಗರವನ್ನು ಮನ-ಮನೆಗೂ ತುಂಬಿಸಿ ರಂಗೇರಿಸುವ ವೇಷಗಳ ಆಗಮನ ಹಬ್ಬಕ್ಕೆ ಮತ್ತಷ್ಟು ಮೆರಗು ತರುತ್ತದೆ.

ಹುಲಿವೇಷ, ಕರಡಿ, ಶಾರ್ದೂಲ, ಯಕ್ಷಗಾನದ ವೇಷಗಳು, ಹುಡುಗ-ಹುಡುಗಿಯ ವೇಷ, ಗಾರೆ ಕೆಲಸಗಾರ, ಪ್ರೇತ ಸಹಿತ ಹೀಗೆ ವಿವಿಧ ಬಗೆಬಗೆಯ ವೇಷಗಳು, ಹಲವು ಧ್ವನಿಗಳು, ಸಂಭಾಷಣೆಗಳು ನವ ದಿವಸಗಳನ್ನು ನೋಡುವ ಸಂದರ್ಭಬಂದೊದಗಿದೆ. ಯಾವುದೋ ಕಷ್ಟ ಕಾಲದಲ್ಲಿ ಸಹಾಯ ಮಾಡು ದೇವರೆ, ನವರಾತ್ರಿ ಸಮಯದಲ್ಲಿ ವೇಷ ಹಾಕಿ ನಿನ್ನ ಹರಕೆ ತೀರಿಸುತ್ತೇನೆಂದು ದೇವರ ಮೊರೆ ಹೋದ ಭಕ್ತರು ನವರಾತ್ರಿ ಸಮಯದಲ್ಲಿ ವೇಷ ಧರಿಸುತ್ತಾರೆ. ಮೈಗೆ ಬಣ್ಣ ಬಳಿದು ಮೊದಲ ನೃತ್ಯ ದೇವಸ್ಥಾನಗಳಲ್ಲಿ, ಆ ಮೇಲೆ ಮನೆ ಮನೆಗಳಲ್ಲಿ, ಅಂಗಡಿ ಮುಂಗಟ್ಟುಗಳ ಎದುರು 9 ದಿನಗಳ ಕಾಲ ವೇಷ ತೆಗೆಯದೆ ಹರಕೆ ತೀರಿಸುತ್ತಾರೆ. ಕೊನೆಯ ನೃತ್ಯವೂ ದೇವಸ್ಥಾನಗಳಲ್ಲಿಯೇ ಮಾಡಿ ವೇಷ ತೆಗೆಯುತ್ತಾರೆ. ಬಂದ ದುಡ್ಡಿನಲ್ಲಿ ಸ್ವಲ್ಪ ಭಾಗವನ್ನು ದೇವಾಲಯಕ್ಕೆ ಸಲ್ಲಿಸುವ ಸಂಪ್ರದಾಯ ಕರಾವಳಿಯಲ್ಲಿ ಮುಂದುವರೆದಿರುವುದು ವಿಶೇಷ.

Related posts

ಕುಕ್ಕೇಡಿ ಬುಳೆಕ್ಕರ ಶ್ರೀ ಶಾರದಾಂಭ ಭಜನಾ ಮಂಡಳಿ ಅಧ್ಯಕ್ಷರಾಗಿ ಶಶಿಕಲಾ, ಕಾರ್ಯದರ್ಶಿಯಾಗಿ ತೃಪ್ತಿ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆಗೆ ವಿಮಾ ಕ್ಷೇತ್ರದ ಗೌರವ

Suddi Udaya

ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಪರಪ್ಪು: ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ಉರೂಸ್ ಮುಬಾರಕ್

Suddi Udaya

ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya
error: Content is protected !!