
ಬೆಳ್ತಂಗಡಿ: ಸರ್ಕಾರದ ಮಾನದಂಡ ಉಲ್ಲಂಘಿಸಿ ಪಡೆದಿರುವ ಅನರ್ಹ ಬಿಪಿಎಲ್ ಕಾರ್ಡ್ಗಳಿಗೆ ಆಹಾರ ಇಲಾಖೆ, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 2683 ಕಾರ್ಡ್ಗಳು ರದ್ದತಿಗೆ ಬಂದು ನಿಂತಿದ್ದು, ಬಳಕೆದಾರರು ಅಗತ್ಯ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಕಾನೂನಿನ ಕ್ರಮದ ಜೊತೆಗೆ ದುರುಪಯೋಗ ಪಡಿಸಿಕೊಂಡಿದ್ದ ಪಡಿತರ ಬಾಬ್ತು, ಪ್ರಮಾಣವನ್ನು ಮುಕ್ತ ಮಾರುಕಟ್ಟೆ ದರದಲ್ಲಿ ಲೆಕ್ಕಹಾಕಿ ವಸೂಲಿ ಮಾಡುವುದಾಗಿ ಇಲಾಖೆ, ಅನರ್ಹ ಫಲಾನುಭವಿಗಳಿಗೆ ಎಚ್ಚರಿಕೆ ನೀಡಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 3,299 ಅಂತ್ಯೋದಯ, 46,022 ಬಿಪಿಎಲ್ ಹಾಗೂ 15,703 ಎಪಿಎಲ್ ಕಾರ್ಡ್ಗಳು ಪೈಕಿ 2,683 ಕಾರ್ಡ್ದಾರರ ಪಟ್ಟಿಯನ್ನು ತಯಾರಿಸಿ ಆಯಾ ನ್ಯಾಯಬೆಲೆ ಅಂಗಡಿಗೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ರವಾನಿಸಿದೆ. ಕೇಂದ್ರ ಸರ್ಕಾರದಿಂದ ಹಂಚಿಕೊAಡಿರುವ ಶಂಕಿತ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಇಲಾಖೆ ಕ್ರಮವಹಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಬಿಪಿಎಲ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಮಾನದಂಡ ನಿಗದಿಪಡಿಸಿದೆ. ಅದರಂತೆ, ವಿವಿಧ ಇಲಾಖೆಗಳ ದತ್ತಾಂಶಗಳನ್ನು ಪರಿಶೀಲಿಸಿದ್ದು, ಮಾನದಂಡಗಳಿಗೆ ವಿರುದ್ಧವಾಗಿರುವ ಶಂಕಿತ ಪಡಿತರ ಚೀಟಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ನೋಟೀಸ್ನಲ್ಲಿ ಇಲಾಖೆ ಉಲ್ಲೇಖಿಸಿದೆ.
ವಾರ್ಷಿಕ ರೂ.1.20 ಲಕ್ಷ ಅಧಿಕ ವರಮಾನ ಇರುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಆದಾಯ ತೆರಿಗೆ ಪಾವತಿಸುವ ಸದಸ್ಯರ ಒಳಗೊಂಡ ಕುಟುಂಬಗಳು, ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ಸಹಕಾರ ಸಂಘ, ನಿಗಮಗಳ ಖಾಯಂ ನೌಕರರು, ವೈದ್ಯರು, ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕ ಪರಿಶೋಧಕರು, ಅನುದಾನಿತ/ ಅನುದಾನರಹಿತ ಶಾಲಾ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವವರು, ಬಹುರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಬಿಪಿಎಲ್ ಪಡೆಯುವಂತಿಲ್ಲ. ಕರ್ನಾಟಕ ಪಡಿತರ ಚೀಟಿ ಅನಧಿಕೃತ ಸ್ವಾಧೀನ ತಡೆಗಟ್ಟುವಿಕೆ-1977 ಮತ್ತು ಕರ್ನಾಟಕ ಅಗತ್ಯ ಸರಕುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ ಆದೇಶ ಅನ್ವಯ ಇಲಾಖೆ, ಅನರ್ಹ ಫಲಾನುಭವಿಗಳಿಗೆ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ನ್ಯಾಯಬೆಲೆ ಅಂಗಡಿಗಳಿಗೆ ಪಟ್ಟಿ:
ಶಂಕಾಸ್ಪದ ಕಾರ್ಡ್ಗಳಿಗೆ ಪಡಿತರ ವಿತರಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಇಲಾಖೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ತಿಂಗಳಿಂದ ಶಂಕಾಸ್ಪದ ಕಾರ್ಡ್ಗಳ ಫಲಾನುಭವಿಗಳಿಗೆ ಅಕ್ಕಿ ಸಿಗಲ್ಲ, ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿರುವ ಬಿಪಿಎಲ್ ಕಾರ್ಡ್ ಪತ್ತೆಹಚ್ಚಿದ ಇಲಾಖೆ, ‘ಶಂಕಾಸ್ಪದ ವರ್ಗ’ಕ್ಕೆ ಸೇರಿಸಿದ್ದ ಪಡಿತರ ಚೀಟಿ ಪಟ್ಟಿಯನ್ನು ಅಂಗಡಿಗಳಿಗೆ ರವಾನಿಸಿದೆ. ಈ ಪಟ್ಟಿಯನ್ನು ಮಾಲೀಕರು, ತಮ್ಮ ಅಂಗಡಿ ಮುಂಭಾಗ ಅಂಟಿಸಿದ್ದಾರೆ. ಪಟ್ಟಿಯಲ್ಲಿ ಹೆಸರು, ಯಾವ ಅಂಗಡಿಯಲ್ಲಿ ಪಡಿತರ ಪಡೆಯುತ್ತಿರುವುದು, ಕಾರ್ಡ್ ಸಂಖ್ಯೆ ಮತ್ತು ಯಾವ ಕಾರಣಕ್ಕೆ ಕಾರ್ಡ್ ರದ್ದು ಪಡಿಸಲಾಗಿದೆ ಸೇರಿ ಇತರ ವಿವರಗಳಿವೆ.
ಸರ್ಕಾರದ ಮಾನದಂಡಗಳ ಅನುಸಾರ ರೂ.1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿಪಿಎಲ್ ಪಡಿತರಚೀಟಿ ಹೊಂದಲು ಅನರ್ಹರು. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ವರದಿ ಪ್ರಕಾರ ಕರ್ನಾಟಕದಲ್ಲಿ ಅಂತಹ 5.80 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ಗುರುತಿಸಿರುವ ಪ್ರಕಾರ ಅಂತಹ ಫಲಾನುಭವಿಗಳ ಸಂಖ್ಯೆ 10.09 ಲಕ್ಷ ಎಂದು ಆಹಾರ ಇಲಾಖೆ ತಿಳಿಸಿದೆ.
ಕುಟುಂಬದಲ್ಲೊಬ್ಬರು ಆದಾಯ ತೆರಿಗೆ ಪಾವತಿದಾರರು, ಕಂಪನಿಗಳಲ್ಲಿ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಜಿಎಸ್ಟಿ ನಂಬರ್ ಹೊಂದಿರುವ ಒಟ್ಟು ರೂ. ೨೫ ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರು. ಅಂತಹ ಶಂಕಾಸ್ಪದ ಫಲಾನುಭವಿಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಅಂಥವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸೆ. ೩೦ರ ಒಳಗೆ ರದ್ದು ಪಡಿಸುವಂತೆ ಎಲ್ಲ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಸೂಚನೆಯ ಬೆನ್ನಲ್ಲೆ, ವಾರ್ಷಿಕ ಆದಾಯ ರೂ. 1.20 ಲಕ್ಷಕ್ಕಿಂತ ಹೆಚ್ಚಿರುವ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿಗಳನ್ನು ರದ್ದುಪಡಿಸಲು ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರ, ತಹಶೀಲ್ದಾರ್ಗಳ ಮೂಲಕ ತಿಳಿವಳಿಕೆ ನೋಟಿಸ್ ನೀಡಲು ಆರಂಭಿಸಿದೆ.
ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ:
ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಸಲ್ಲಿಸಿರುವ ಪಟ್ಟಿಯಲ್ಲಿ ಹೆಸರು ಉಲ್ಲೇಖಿಸಿರುವ ಪಡೀತರ ಚೀಟಿ ಬಳಕೆದಾರರು ಅಗತ್ಯ ದಾಖಲೆಗಳೊಂದಿಗೆ ಆಹಾರ ಇಲಾಖೆಗೆ ಭೇಟಿ ನೀಡಬೇಕು. ಆದಾಯ ಪ್ರಮಾಣ ಪತ್ರ, ಆಧಾರ್ ಪ್ರತಿ, ಪಡಿತರ ಚೀಟಿ, ಮನೆಯ ಫೋಟೋದೊಂದಿಗೆ, ತಾಲೂಕು ಕಚೇರಿಯ ಆಹಾರ ಶಾಖೆಗೆ ಭೇಟಿ ನೀಡಬೇಕು. ಕಾರ್ಡ್ದಾರರು ಅರ್ಹತೆಯನ್ನು ದೃಢಪಡಿಸಿದಲ್ಲಿ ಮಾತ್ರ ಬಿಪಿಎಲ್ ಆಗಿ ಉಳಿಯುತ್ತದೆ. ಇಲ್ಲವಾದಲ್ಲಿ ಪಡಿತರ ಚೀಟಿ ಎಪಿಎಲ್ ಆಗುತ್ತದೆ ನಿಗದಿತ ಸಮಯದೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ. ಇದಲ್ಲದೇ ಗ್ರಾಮ ಆಡಳಿತಾಧಿಕಾರಿಗಳಿಗೆ ಆದಾಯ ಪ್ರಮಾಣ ದೃಡೀಕರಣಕ್ಕಾಗಿ ಪಟ್ಟಿ ರವಾನಿಸಲಾಗಿದ್ದು ಅಗತ್ಯ ದಾಖಲೆಗಳೊಂದಿಗೆ ಬಳಕೆದಾರರು ಆಹಾರ ಇಲಾಖೆಯತ್ತ ದೌಡಾಯಿಸುತ್ತಿದ್ದಾರೆ.
ರದ್ದತಿ ಬಂದಿರುವ ಕಾರ್ಡ್ ಗಳ ವಿವರ:











