ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪ್ರಕಾರದ ಗಮನಕ್ಕೆ ತರಲು ತಯಾರಿಸಲಾದ ಹಕ್ಕೊತ್ತಾಯ ವರದಿಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮೂಲಕ ಕೇಂದ್ರ ಸರಕಾರಕ್ಕೆ ಗುರುವಾರ ಮಂಗಳೂರಿನಲ್ಲಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಉಜಿರೆ ಇದರ ಮೂಲಕ ಸಲ್ಲಿಸಲಾದ ಈ ಹಕ್ಕೊತ್ತಾಯ ವರದಿಯನ್ನು ವೇದಿಕೆಯ ಕೋರಿಕೆಯಂತೆ ಅರ್ಥಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ ತಯಾರಿಸಿದ್ದಾರೆ.
ರಬ್ಬರ್ ಬೆಲೆಗೆ ಸ್ಥಿರತೆ ಇಲ್ಲದ ಕಾರಣ ಕೃಷಿಕರು ರಬ್ಬರ್ ಗಿಡಗಳನ್ನು ಕಡಿಯುತ್ತಿರುವ ಪರಿಸ್ಥಿತಿ ಉದ್ಭವಿಸಿದೆ. ಮುಂದೆ ಬೆಲೆ ಸ್ಥಿರತೆ ಬಂದರೆ ಮತ್ತೆ ಕೃಷಿ ಮಾಡುವುದು ಕಷ್ಟಸಾಧ್ಯ, ಟಾಪರ್ ಗಳ ಕೊರತೆ, ಸರಕಾರದ ಆಮದು ನೀತಿ ,ರಬ್ಬರ್ ಬೆಲೆ ಸ್ಥಿರೀಕರಣಕ್ಕೆ ಸರಕಾರ ಮುಂದಾಗದಿರುವುದು, ರಬ್ಬರ್ ಕೃಷಿಗೆ ಸರಕಾರದಲ್ಲಿ ಪ್ರತ್ಯೇಕ ಇಲಾಖೆ ಬೇಕು, ಹವಾಮಾನ ವೈಪರಿತ್ಯ ಇತ್ಯಾದಿಗಳ ಕುರಿತು ಸಂಸದರಲ್ಲಿ ಚರ್ಚಿಸಿ ಸರಕಾರದ ಗಮನಕ್ಕೆ ತರುವಂತೆ ಮನವಿ ಮಾಡಲಾಯಿತು.
ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಸಲಹೆಗಾರ ಡಾ. ವಿಘ್ನೇಶ್ವರ ವರ್ಮುಡಿ ಉಪಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಪ್ರಸಾದ್ ಕೌಶಲ್ ಶೆಟ್ಟಿ, ಗೋಪಾಲಕೃಷ್ಣ ಭಟ್, ಕೃಪಾ, ಸಂಯೋಜಕ ಅನಂತ ಭಟ್ ಎಂ., ಕಾರ್ಯದರ್ಶಿ ರಾಜು ಶೆಟ್ಟಿ ಉಪಸ್ಥಿತರಿದ್ದರು.
ರಬ್ಬರ್ ಕೃಷಿಕರ ಪರಿಸ್ಥಿತಿ ಕುರಿತು ಹಕ್ಕೊತ್ತಾಯ ವರದಿಯನ್ನು ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸಿ ವೇದಿಕೆಯ ಸದಸ್ಯರಿಗೆ ಭೇಟಿಯ ಅವಕಾಶ ಕಲ್ಪಿಸುವ ಕುರಿತು ಅವರು ಭರವಸೆ ನೀಡಿದ್ದಾರೆ. ಹಾಗೂ ಜನವರಿಯಲ್ಲಿ ಉಜಿರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸುವ ಕುರಿತು ತಿಳಿಸಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದ್ದಾರೆ.











