
ಪುಂಜಾಲಕಟ್ಟೆ :ಯಕ್ಷಗಾನವು ಧರ್ಮಾಧಾರಿತ ಚಿಂತನೆಯನ್ನು ಹೊಂದಿದ್ದು, ಸನಾತನ ಧರ್ಮದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಧರ್ಮದ ಉಳಿವಿಗೆ ಯಕ್ಷಾಗಾನವನ್ನು ಉಳಿಸಿ,ಬೆಳೆಸುವ ಯಕ್ಷ ಕೂಟ ಮಧ್ವದ ಕಾರ್ಯ ಅಭಿನಂದನೀಯ ಎಂದು ಮಧ್ವ, ಮಧ್ವಕಟ್ಟೆಯ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರು ಹೇಳಿದರು.
ಅವರು ಪುಂಜಾಲಕಟ್ಟೆಯ ಬಳಿಯ ಕಾವಳಪಡೂರು ಮಧ್ವದ ಮಧ್ವಪ್ಯಾಲೆಸ್ ಸಭಾಂಗಣದಲ್ಲಿ ನಡೆದ ಮಧ್ವ ಯಕ್ಷಕೂಟ ಇದರ ೬ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಯಕ್ಷಗಾನ ನಮ್ಮ ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕ, ನೈತಿಕ ಮೌಲ್ಯಗಳನ್ನು ತಿಳಿಸುವ ಏಕೈಕ ಕಲಾಪ್ರಾಕಾರವಾಗಿದೆ ಎಂದು ತಿಳಿಸಿದರು. ಮೂಡುಬಿದಿರೆ ಮಹಾವೀರ ಕಾಲೇಜ್ನ ಪ್ರಾಂಶುಪಾಲ ಡಾ| ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಳ್ಳಮಂಜ ಉದ್ಯಮಿ ಜಯಪ್ರಕಾಶ್ ಸಂಪಿಗೆತ್ತಾಯ, ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ ಜೈನ್ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್, ಕಾವಳಪಡೂರು ಗ್ರಾ.ಪಂ.ಸದಸ್ಯೆ ಭವಾನಿ ಶ್ರೀಧರ್ ಪೂಜಾರಿ, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಪ್ರಬಂಧಕ ಗೋಪಾಲಕೃಷ್ಣ ಶೆಟ್ಟಿ, ಮಧ್ವ ಪ್ಯಾಲೇಸ್ ಮಾಲಕ ರುಕ್ಮಯ್ಯ ಗೌಡ,ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಪಂಜಿಕಲ್ಲು, ಕಾರ್ಯದರ್ಶಿ ಗಣನಾಥ ಶೆಟ್ಟಿ, ಶಿವಪ್ಪ ಗೌಡ ನಿನ್ನಿಕಲ್ಲು, ಸುರೇಂದ್ರ ಶೆಟ್ಟಿ, ಸುಜಾತ ಶೆಟ್ಟಿ, ಯುವರಾಜ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ, ಸಾಕ್ಸೋಪೋನ್ ವಾದಕ ಬಾಬು ಸಪಲ್ಯ ವಗ್ಗ ಅವರನ್ನು ಸಮ್ಮಾನಿಸಲಾಯಿತು. ಕಾರಿಂಜ ಯಕ್ಷಾವ್ಯಾಸಂ ಸಂಚಾಲಕಿ ಸಾಯಿಸುಮಾ ಎಂ.ನಾವಡ ಅಭಿನಂದಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಧ್ವ ಸ್ವಾಗತಿಸಿ, ಉಡುಪಿ ಪೇಜಾವರ ಮಠದ ಹಿರಿಯ ಯತಿಗಳಾಗಿದ್ದ ವಿಶ್ವೇಶ ತೀರ್ಥರಿಂದ ಪ್ರಾರಂಭಗೊಂಡ ಈ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಯಕ್ಷಗಾನ ಕಲೆಗೆ ಎಲ್ಲರ ಪ್ರೋತ್ಸಾಹ ಬೇಕಾಗಿದೆ ಎಂದು ತಿಳಿಸಿದರು. ರಂಗ ಕಲಾವಿದ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಕೃಷ್ಣ ಸಂಧಾನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ್ ಕನ್ಯಾಡಿ, ಮದ್ದಲೆ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚೆಂಡೆ ಶಿತಿಕಂಠ ಭಟ್ ಉಜಿರೆ, ಶ್ರೀಕೃಷ್ಣನಾಗಿ ಸದಾಶಿವ ಆಳ್ವ, ವಿದುರನಾಗಿ ಸಾಯಿ ಸುಮನ, ಕೌರವನಾಗಿ ಗಣೇಶ್ ಶೆಟ್ಟಿ ಪಾತ್ರ ನಿರ್ವಹಿಸಿದರು.











