ಉಜಿರೆ: ದುರ್ಗಾ ಮೆಲೋಡೀಸ್ ನಾವೂರು ಇದರ ಫೇಸ್ಬುಕ್, ಲೈವ್ ಪೇಜ್ ಇದರ 100 ಸಂಭ್ರಮವು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಡಿ. 14 ರಂದು ಆದ್ದೂರಿಯಾಗಿ ನಡೆಯಿತು.
ಉಜಿರೆ ಶ್ರೀ ಜನಾದ೯ನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತಸರರಾದ ಶರತ್ಕೃಷ್ಣ ಪಡ್ಡೆಟ್ನಾಯ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೊಡ್ಡ, ದೊಡ್ಡ ಪ್ರತಿಭೆಗಳಿವೆ. ಇದು ಬೆಳಗಬೇಕಾದರೆ ಸೂಕ್ತ ವೇದಿಕೆ ಬೇಕು. ಅವರಿಗೆ ಸೂಕ್ತ ಅವಕಾಶ ಬೇಕು. ಈಗ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭೆಗಳನ್ನು ತೋರಿಸುವ ಅವಕಾಶ ಇದೆ. ದುರ್ಗಾಮೆಲೋಡಿಸ್ ಕೂಡಾ ತೆರೆಯ ಮರೆಯ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿಕೊಟ್ಟಿರುವುದು ದೊಡ್ಡ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಜಿರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಷಾ ಕಾರಂತ್ ಅಧ್ಯಕ್ಷತೆ ವಹಿಸಿ, ಶಿಕ್ಷಣ, ಸಂಗೀತ, ಸೇರಿದಂತೆ ಬೇರೆ, ಬೇರೆ ಕ್ಷೇತ್ರಗಳಲ್ಲಿ ಅನೇಕ ಪ್ರತಿಭೆಗಳು ಇದ್ದಾರೆ. ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ, ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳು ಇತರ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಾರೆ. ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡುತ್ತಾರೆ. ಆನೇಕ ಒತ್ತಡಗಳಲ್ಲಿರುವಾಗ ಅದರಿಂದ ಹೊರಬರಲು ಸಂಗೀತ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ದಿನೇಶ್ ಪೂಜಾರಿ ಉಜಿರೆ, ಸಾಯಿ ಕೃಪಾ ಇಂಡಸ್ಟ್ರೀಸ್ನ ಉಜಿರೆಯ ದೇವಪ್ಪ ಗೌಡ, ಮಿತ್ತಬಾಗಿಲು ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಸಂಪಾದಕ ಬಿ.ಎಸ್. ಕುಲಾಲ್, ಮಂಗಳೂರು ಮೇಘಾಲಯ ಮೆಲೋಡೀಸ್ನ ಲತೇಶ್ ಪುತ್ರನ್, ಬಿ. ರತ್ನಾಕರ ‘ನನಸು’ ನಾವೂರು, ಕನಕರಾಜ್ ಬೆಳ್ತಂಗಡಿ, ಮಾತನಾಡಿ ಶುಭ ಕೋರಿದರು. ವಿಶೇಷ ಅಹ್ವಾನಿತರಾಗಿ ಚಲನ ಚಿತ್ರ ನಟರಾದ ಚೇತನ್ ಜೈನ್ ಮೂಡಬಿದ್ರೆ, ಪ್ರವೀಣ್ ಜೈನ್ ಮೂಡಬಿದ್ರೆ ಭಾಗವಹಿಸಿದ್ದರು.

ಸಮಾರಂಭದಲ್ಲಿ ಅತ್ತಾಜೆ ಮಧುಸೂದನ ಆಚಾರ್ಯ, ಬೆಳಾಲು ಬಾಬು ಆಚಾರ್ಯ, ಪ್ರವೀಣ್ ಜೈನ್ ಮೂಡಬಿದ್ರೆ, ಚೇತನ್ ಜೈನ್ ಮೂಡಬಿದ್ರೆ, ವರ್ಲ್ಡ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಲತೇಶ್ ಪುತ್ರನ್ ಇವರನ್ನು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದವರಾದ ಭಾಗ್ಯಲಕ್ಷ್ಮೀ ನಾವೂರು ಹಾಗೂ ಹರ್ಷತಾ ಬೆಳ್ತಂಗಡಿ ಇವರಿಗೆ ಧನ ಸಹಾಯ ವಿತರಿಸಲಾಯಿತು. ತಂಡದ ನಿರ್ವಾಹಕರಾದ ಅಶೋಕ ಆಚಾರ್ಯ ಅತ್ತಾಜೆ ಹಾಗೂ ತಂಡಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಸಂತೋಷ ಆಚಾರ್ಯ ಕಾರ್ಯಕ್ರಮದ ಸಂಪೂರ್ಣ ನೇತೃತ್ವ ವಹಿಸಿದ್ದರು. ದೀಕ್ಷಿತಾ ಬೆಳ್ತಂಗಡಿ ಇವರ ಪ್ರಾರ್ಥನೆ ಬಳಿಕ ಬಿ.ರತ್ನಾಕರ ‘ನನಸು’ ನಾವೂರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಶ್ ಆಚಾರ್ಯ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ಆಚಾರ್ಯ ವಂದಿಸಿದರು. ಬಳಿಕ ಸಂಜೆ ತನಕ ಲೈವ್ ಸಂಗೀತ ಕಾರ್ಯಕ್ರಮ ನಡೆಯಿತು.











