ವೇಣೂರು: ವೇಣೂರು ವಲಯ ಅರಣ್ಯ ಇಲಾಖೆಗೆ ಒಳಪಡುವ ಬಜಿರೆ ಗ್ರಾಮದ ಹೊಸಪಟ್ಣ ಪರಿಸರದಲ್ಲಿ ಕಳೆದ ೪-೫ ದಿನಗಳಿಂದ ಎರಡು ಚಿರತೆಗಳು ಹಗಲಿನಲ್ಲೇ ಓಡಾಟ ನಡೆಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಡಿ.೧೭ ರಂದು ಸಂಜೆ ವೇಳೆಗೆ ದಾರಿ ಮಧ್ಯೆ ಚಿರತೆ ಇರುವುದನ್ನು ವ್ಯಕ್ತಿಯೊಬ್ಬರು ಕಂಡಿದ್ದಾರೆ. ಬಂಟ್ವಾಳದ ಅಜ್ಜಿಬೆಟ್ಟು ಹಾಗೂ ಬೆಳ್ತಂಗಡಿಯ ಹೊಸಪಟ್ಣದಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ರಾತ್ರಿ ವೇಳೆ ಚಿರತೆ ಕೂಗುವ ಶಬ್ದ ಕೇಳಿ ಜನರು ಭಯಭೀತರಾಗಿದ್ದಾರೆ.
ಹೊಸಪಟ್ಣವಾಗಿ ವಿವಿಧ ಶಾಲಾ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಹೋಗುತ್ತಿದ್ದು ಪೊಷಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ದಾರಿ ಮಧ್ಯೆ ಗಿಡಗಂಟಿಗಳು ಬೆಳೆದಿದ್ದು ಇನ್ನೂ ತೆರವುಗೊಳಿಸುವ ಕಾರ್ಯ ನಡೆದಿಲ್ಲ ಚಿರತೆ ಎಲ್ಲಿ ಇದರಲ್ಲಿ ಅವಿತುಕೊಳ್ಳುತ್ತದೆ ಎಂಬ ಭಯ ಜನರಲ್ಲಿದೆ. ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿದೆ. ಆದರೆ ಬೋನ್ ಅಳವಡಿಸುವ ಕಾರ್ಯ ಆಗಿಲ್ಲ. ಚಿರತೆ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಕಾಣಸಿಗುತ್ತಿದ್ದು ನಿತ್ಯ ಕೆಲಸಕ್ಕೆ ಹೋಗುವ ಮಂದಿ ಜೀವಭಯದಿಂದ ಸಂಚರಿಸುತ್ತಿದ್ದಾರೆ. ಸುತ್ತಮುತ್ತಲಿನ ಜನರು ಪಟಾಕಿ ಸಿಡಿಸಿ ಕಾಡಿಗೆ ಹಟ್ಟಿದರು, ಚಿರತೆ ಮತ್ತೆ ನಾಡಿನತ್ತ ಬರುತ್ತಿದೆ. ಕಳೆದ ರಾತ್ರಿ ಬೈಕ್ ಸವಾರೊಬ್ಬರು ಚಿರತೆ ಹಾವಳಿಯಿಂದ ಭಯಭೀತರಾಗಿ ಮನೆ ಸೇರಿದ ಘಟನೆ ನಡೆದಿದೆ. ಯಾವುದೇ ಅನಾಹುತ ಸಂಭವಿಸಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಊರವರು ಆಗ್ರಹಿಸಿದ್ದಾರೆ.











