ನಿಡ್ಲೆ : ಉಡುಪಿ ಅನ್ನಬ್ರಹ್ಮ ಶ್ರೀ ಕೃಷ್ಣದೇವರ ಸನ್ನಿಧಿಯಲ್ಲಿ ಮತ್ತೆ ಪರ್ಯಾಯ ಮಹೋತ್ಸವ ಸಂಭ್ರಮ. ಶೀರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ದೇವರ ಪೂಜಾ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಆ ಪ್ರಯುಕ್ತ ಶ್ರೀಪಾದರು ದೇಶ – ಗ್ರಾಮ ಪರ್ಯಟನೆಯನ್ನು ಕೈಗೊಂಡಿರುತ್ತಾರೆ.

ಶ್ರೀಪಾದರ ಪೂರ್ವಾಶ್ರಮ ನಿಡ್ಲೆ ಗ್ರಾಮದ ಮಚ್ಚಳೆ ಮನೆತನದವರಾಗಿದ್ದು, ಇವರು ಸರ್ವಜ್ಞ ಪೀಠವನ್ನು ಅಲಂಕರಿಸಲಿರುವುದರಿಂದ ದೇಶ-ಗ್ರಾಮ ಪರ್ಯಟನೆ ನಿಮಿತ್ತ ನಿಡ್ಲೆ ಗ್ರಾಮಕ್ಕೆ ಜ. 1ರಂದು ಆಗಮಿಸಿದ್ದು, ಪೂಜ್ಯ ಶ್ರೀಪಾದರನ್ನು ನಿಡ್ಲೆ ಎಸ್ಎಲ್ ವಿ ಪೆಟ್ರೋಲ್ ಪಂಪಿನ ಹತ್ತಿರದಿಂದ ಚೆಂಡೆ, ಪೂರ್ಣಕುಂಭ ಕಲಶದೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಕುದ್ರಾಯ ಆದಿತ್ಯ ವ್ಯೂ ಹೋಟೆಲ್ ಪಂಚವಟಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.

ಶ್ರೀಪಾದರಿಗೆ ಸಭಾಂಗಣದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ, ವಿವಿಧ ಸಂಘಟನೆಗಳಿಂದ ಹುಟ್ಟೂರ ಗೌರವಾರ್ಪಣೆ, ಪಾದಪೂಜೆ, ಪಾದಕಾಣಿಕೆ, ಶ್ರೀಪಾದರಿಂದ ದೇವರಿಗೆ ಪೂಜೆ ನಡೆಯಿತು.

ಶ್ರೀಗಳಿಂದ ಆಶೀರ್ವಚನ ನಡೆಯಿತು. ದಿವಾನ ಉದಯ ಕುಮಾರ್ ಪರ್ಯಾಯದ ಬಗ್ಗೆ ಮಾಹಿತಿ ನೀಡಿದರು. ವೇ. ಮೂ. ರಾಘವೇಂದ್ರ ಉಪಾಧ್ಯಾಯರು, ಪ್ರವೀಣ್ ಹೆಬ್ಬಾರ್ ಸಹಕರಿಸಿದರು.

ಮೆರವಣಿಗೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಪಾಲ್ಗೊಂಡಿದ್ದರು. ಡೀಕಯ್ಯ ಬರೆಂಗಾಯರ ಕೋಣಗಳು ಪಾಲ್ಗೊಂಡಿತ್ತು.
ಕಾರ್ಯಕ್ರಮದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ ನಿಡ್ಲೆ ಯ ಅಧ್ಯಕ್ಷರು, ಸದಸ್ಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ಮಚ್ಚಳೆ ಮನೆಯವರು ಉಪಸ್ಥಿತರಿದ್ದರು.

ಚಂದ್ರಶೇಖರ್ ಕಜೆ ಕಾರ್ಯಕ್ರಮ ನಿರೂಪಿಸಿದರು.













