ಬೆಳ್ತಂಗಡಿ: ಹಿಂದೂ ಸಂಗಮ ಕಾರ್ಯಕ್ರಮವು ಯಾವುದೇ ಒಬ್ಬ ಸಂಘಟನೆ ಅಥವಾ ವ್ಯಕ್ತಿಯ ಕಾರ್ಯಕ್ರಮವಲ್ಲ, ಸಮಾಜದೊಳಗಿನ ಶಕ್ತಿಗಳನ್ನು ಒಂದೇ ವೇದಿಕೆಗೆ ತರುವ, ಸಮಾಜವೇ ರೂಪಿಸಿ ಸಮಾಜವೇ ನಡೆಸುವ ಮಹತ್ವದ ಸಾಮಾಜಿಕ ಅಭಿಯಾನವಾಗಿದೆ. ತಾಲೂಕಿನ ಏಳು ಪ್ರಮುಖ ಕೇಂದ್ರಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಜ18ರಂದು ಪ್ರಾರಂಭವಾಗಿ ಫೆ.1ರವರೆಗೆ ನಡೆಯಲಿದೆ ಎಂದೂ ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ತಾಲೂಕು ಸಂಯೋಜಕ ಅನಿಲ್ ಕುಮಾರ್ ಯು ಹೇಳಿದರು.
ಅವರು ಜ 13 ರಂದು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು .
ಇಂದಿನ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿರುವುದು, ಸಾಮಾಜಿಕ ಸಾಮರಸ್ಯಕ್ಕೆ ಸವಾಲುಗಳು ಎದುರಾಗುತ್ತಿರುವುದು, ಪರಿಸರ ಸಂರಕ್ಷಣೆಯ ಅಗತ್ಯ ತೀವ್ರವಾಗಿರುವುದು ಹಾಗೂ ಸ್ವಾವಲಂಬಿ–ಸ್ವಾಭಿಮಾನಿ ಜೀವನ ಪದ್ಧತಿಯ ಅವಶ್ಯಕತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಈ ಹಿಂದು ಸಂಗಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವುದೇ ಇದರ ಪ್ರಧಾನ ಉದ್ದೇಶವಾಗಿದೆ ಎಂದರು.
ಸಾಮಾಜಿಕ ಸೇವೆ, ಸಹಕಾರ, ಸ್ವಾವಲಂಬನೆ ಮತ್ತು ಸೇವಾಭಾವನೆಗಳನ್ನು ಉತ್ತೇಜಿಸುವ ಸಲುವಾಗಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೀತಿಯ ಸ್ವಯಂಸೇವಾ ಸಂಸ್ಥೆಗಳು, ಸಂಘಟನೆಗಳು ಹಾಗೂ ಸಮುದಾಯದ ಹಿರಿಯರು, ಯುವಕರು ಮತ್ತು ಮಹಿಳೆಯರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಇದು ಸಮಾಜದ ಎಲ್ಲ ವರ್ಗಗಳನ್ನು ಒಟ್ಟುಗೂಡಿಸುವ ಸಮನ್ವಯದ ವೇದಿಕೆಯಾಗಿರಲಿದೆ.
ಹಿಂದು ಸಂಗಮದ ಮೂಲಕ ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣೆ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಎಂಬ ಆದರ್ಶಗಳನ್ನು ಜನಸಾಮಾನ್ಯರ ಬದುಕಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ. ಮಾತುಗಳ ಮಟ್ಟಕ್ಕೆ ಸೀಮಿತವಾಗದೇ, ಪ್ರಾಯೋಗಿಕವಾಗಿ ಸಮಾಜಕ್ಕೆ ದಿಕ್ಕು ತೋರಿಸುವ ಕಾರ್ಯಕ್ರಮಗಳಾಗಿ ಹಿಂದು ಸಂಗಮ ರೂಪುಗೊಂಡಿದೆ ಎಂದರು.
ಈ ಹಿಂದೂ ಸಂಗಮ ಕಾರ್ಯಕ್ರಮಗಳಿಗಾಗಿ ಕಳೆದ ಕೆಲವು ತಿಂಗಳುಗಳಿಂದ ತಾಲೂಕು ಮಟ್ಟದಲ್ಲಿ ಮಂಡಲ ಮಟ್ಟದಲ್ಲಿ ವ್ಯಾಪಕ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಪ್ರತಿಯೊಂದು ಮಂಡಲದಲ್ಲೂ ಸ್ಥಳೀಯ ಸಮಾಜದ ಬಂಧುಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ತಾಲೂಕು ಆಯೋಜನಾ ಸಮಿತಿಯನ್ನು ಮಂಡಲದಲ್ಲಿ ಮಂಡಲ ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಸಂಘಟನೆಗಳು, ದೈವಸ್ಥಾನ–ದೇವಾಲಯಗಳ ಭಜನಾ ಮಂದಿರಗಳ ಪ್ರಮುಖರು, ಸಾಮಾಜಿಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಗಳು ನಡೆದಿವೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಜಿತ್ ಜಿ ಶೆಟ್ಟಿ ಮಾತನಾಡಿ ಹಿಂದೂ ಸಂಗಮದ ಯಶಸ್ಸಿಗಾಗಿ ಸ್ವಯಂಸೇವಕರ ತಂಡಗಳನ್ನು ರೂಪಿಸಲಾಗಿದ್ದು, ಶಿಸ್ತು, ಸಮಯಪಾಲನೆ ಹಾಗೂ ಸಮನ್ವಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೂ ತಲುಪುವಂತೆ ಆಹ್ವಾನ ಕಾರ್ಯ, ಜಾಗೃತಿ ಅಭಿಯಾನಗಳು, ಪ್ರತಿ ಮಂಡಲಗಳಲ್ಲಿ ಮಾತ್ರ ಸಂಗಮ, ಬೂತು ಬೂತಗಳಲ್ಲಿ ಮನೆ ಮನೆ ಮಹಾ ಸಂಪರ್ಕ ಅಭಿಯಾನ, ಪಟ್ಟಣ ಪ್ರದೇಶಗಳಲ್ಲಿ ಹಿಂದೂ ಸಂಗಮ ಸಂಪರ್ಕ ಯಾತ್ರೆ ಮತ್ತು ವಿವಿಧ ರೀತಿಯಲ್ಲಿ ಸಂಪರ್ಕ ಕಾರ್ಯಗಳು ನಡೆಯುತ್ತಿವೆ. ಹಿಂದೂ ಸಂಗಮವು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಸಮಾಜದಲ್ಲಿ ದೀರ್ಘಕಾಲೀನ ಸಕಾರಾತ್ಮಕ ಪರಿಣಾಮ ಬೀರುವ ಚಳವಳಿಯಾಗಿ ರೂಪುಗೊಳ್ಳಬೇಕು ಎಂಬ ದೃಷ್ಟಿಯಿಂದ ಪೂರ್ವಭಾವಿ ತಯಾರಿಗಳು ಸಾಗುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಂಗಮ ಸಮಿತಿ ಉಪಾಧ್ಯಕ್ಷೆ ಪ್ರೀತಿ ರಾವ್, ಕಾರ್ಯದರ್ಶಿ ವಸಂತ ಮರಕಡ ಮಚ್ಚಿನ, ಗುರುವಾಯನಕೆರೆ ಮಂಡಲ ಸಂಯೋಜಕ ಚಿದಾನಂದ ಇಡ್ಯ, ಬಂದಾರು ಮಂಡಲ ಸಂಯೋಜಕ ಉದಯ ಬಿಕೆ, ಮಡಂತ್ಯಾರು ಮಂಡಲ ಸಂಯೋಜಕ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.











