ಮಲವಂತಿಗೆ: ಇತ್ತೀಚಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ಚಿರತೆಯ ಹಾವಳಿ ಹೆಚ್ಚುತ್ತಿದ್ದು ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪೆ ಕುಂಡಾಲ್ ಮನೆ ಜಯಂತ್ ಎಂಬವರ ಮನೆಯ ಹೊರಚಾವಣಿಯಲ್ಲಿದ್ದ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಫೆ.5ರ ಮಧ್ಯರಾತ್ರಿ ನಡೆದಿದೆ.

ತಾಲೂಕಿನಾದ್ಯಂತ ಚಿರತೆಯ ಅಟ್ಟಹಾಸಕ್ಕೆ ಸಾಕು ಪ್ರಾಣಿಗಳಾದ ನಾಯಿ, ದನಕರುಗಳು ಬಲಿಯಾಗುತ್ತಿದ್ದು, ಈವರೆಗೂ ಲಗ್ಗೆ ಇಡದ ಪ್ರದೇಶಕ್ಕೂ ಚಿರತೆ ಪ್ರವೇಶ ಮಾಡಿರುತ್ತದೆ. ದಿಡುಪೆ ಜಯಂತ್ ರವರ ಮನೆಯಿಂದ ನಾಯಿಯನ್ನು ಹೊತ್ತೊಯ್ದ ದೃಶ್ಯವು ಅವರ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ:
ಈ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ದೂರದೂರಿನ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದು, ಮರಳಿ ಮನೆಗೆ ತಲುಪುವ ಸಮಯ ರಾತ್ರಿಯಾಗುವ ಕಾರಣ, ಶೀಘ್ರದಲ್ಲೇ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹವನ್ನು ಮಾಡುತ್ತಿದ್ದಾರೆ.
ನೆಮ್ಮದಿಯ ಜೀವನ ನಡೆಸುವುದಕ್ಕೆ ಅಸಾಧ್ಯ:
ಮಲವಂತಿಗೆ, ದಿಡುಪೆ, ಮಿತ್ತಬಾಗಿಲು ಭಾಗದ ಜನರು ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಅಟ್ಟಹಾಸಕ್ಕೆ ನೆಮ್ಮದಿಯಿಂದ ಜೀವನವನ್ನು ನಡೆಸುವುದಕ್ಕೆ ಅಸಾಧ್ಯವಾಗಿದೆ. ಆನೆಗಳ ಉಪಟಳಕ್ಕೆ ಸೋಲಾರ್ ಬೇಲಿಗಳನ್ನು ನಿರ್ಮಾಣ ಮಾಡಬೇಕು ಎಂದು ಸಾಕಷ್ಟು ಬಾರಿ ಅರಣ್ಯ ಇಲಾಖೆ ಮನವಿ ನೀಡಿದ್ದೇವೆ. ಪ್ರಸ್ತುತ ಸಂದರ್ಭದಲ್ಲಿ ಚಿರತೆಯ ಹಾವಳಿ ಹೆಚ್ಚುತ್ತಿದ್ದು, ಅರಣ್ಯ ಇಲಾಖೆಯಲ್ಲಿ ಸರಿಯಾದ ಬೋನುಗಳು ಕೂಡ ಇಲ್ಲ. ಇಂದು ಸಾಕು ನಾಯಿಗಳನ್ನು ಕೊಂಡೊಯ್ದ ಚಿರತೆ, ನಾಳೆ ಮನುಷ್ಯರನ್ನು ತಿಂದು ಮುಗಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?? ಇದಕ್ಕೆಲ್ಲ ನೇರ ಅರಣ್ಯ ಇಲಾಖೆಯೇ ಕಾರಣವಾಗುತ್ತದೆ.
–ಮಧುಸೂಧನ್ ಮಲವಂತಿಗೆ , ಅಧ್ಯಕ್ಷರು ಬಿಜೆಪಿ ಶಕ್ತಿ ಕೇಂದ್ರ











