ಬೆಳ್ತಂಗಡಿ: ಮನೆಯಲ್ಲಿ ಬಡತನವಿದ್ದರೂ, ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿ ಗುರಿಯನ್ನು ಹಿಡಿದಿಟ್ಟುಕೊಂಡು, ವಿದ್ಯಾಭ್ಯಾಸ ಮುಂದುವರೆಸಿ, ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದವರು ಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾಮದ ಮಾಪಲಾಡಿ ನಿವಾಸಿ ಮಂಜುನಾಥ್ ಶಿವಲಿಂಗಪ್ಪ ಜಿ.
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಕರ್ನಾಟಕ ಹೈಕೋರ್ಟ್- 2025ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದರು. ಅಕ್ಟೋಬರ್ ತಿಂಗಳಲ್ಲಿ ಪ್ರಾಥಮಿಕ ಪರೀಕ್ಷೆ ಮತ್ತು ಡಿಸೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. 2026ರ ಜನವರಿ ತಿಂಗಳಲ್ಲಿ ಹೈಕೋರ್ಟ್ನಲ್ಲಿ ಮೌಖಿಕ ನೇರ ಸಂದರ್ಶನ ನಡೆದಿತ್ತು.
ತನ್ನ 25ನೇ ವಯಸ್ಸಿನಲ್ಲಿ ಮೂಲತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾದ ಇವರು ಶಿವಲಿಂಗಪ್ಪ ಮತ್ತು ನಿಂಗವ್ವ ದಂಪತಿಯ ಪುತ್ರ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನೆರೆಯ ಪುತ್ತೂರಿನಲ್ಲಿ ಪೂರೈಸಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಪದವಿ ಪಡೆದರು. ಮಂಜುನಾಥ್ ಬೆಳ್ತಂಗಡಿಯ ವಕೀಲ ಯತೀಶ್ ಶೆಟ್ಟಿಯವರೊಂದಿಗೆ ಜೂನಿಯರ್ ಆಗಿ ಕಾನೂನು ವೃತ್ತಿ ಅಭ್ಯಾಸ ಆರಂಭಿಸಿದರು. ಬೆಳ್ತಂಗಡಿ ಬಾರ್ ಆಸೋಶಿಯೇಶನ್ ಸದಸ್ಯರಾಗಿರುವ ಇವರು ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಲ್ಲಿ ತೇರ್ಗೆಡೆ ಹೊಂದಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ. ಅದರಲ್ಲಿಯೂ ಮೊದಲು ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ತೇರ್ಗೇಡೆ ಹೊಂದಿರುವುದು ಹೆಮ್ಮೆಯ ವಿಚಾರ. ಈ ಸಾಧಕ ಯುವಕ ಕಡುಬಡತನದ ಕುಟುಬಂದಿಂದ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸಿ ಈ ಸಾಧನೆ ಮಾಡಿದ್ದಾರೆ. ಕಳೆದ 18 ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ನೆಲೆಸಿರುವ ಮಂಜುನಾಥ್ ಕುಟುಂಬ ಬೆಳ್ತಂಗಡಿಯಲ್ಲಿ ಕಳೆದ ಆರು ವರ್ಷಗಳಿಂದ ವಾಸವಾಗಿದ್ದಾರೆ.

ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮಾಪಲಾಡಿ ಸುರೇಶ್ ಶೆಟ್ಟಿ ಎಂಬುವರ ಮನೆಯಲ್ಲಿ ತಾಯಿ ನಿಂಗವ್ವ ಮನೆ ಮತ್ತು ತೋಟ ಕೆಲಸ ಮಾಡಿಕೊಂಡು ತನ್ನ ಮಕ್ಕಳ ಉಜ್ವಲ ಭವಿಷ್ಯಗೆ ವಿದ್ಯಾರ್ಜನೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡು ಅವರಿಗೆ ವಾಸಕ್ಕೆಂದು ಕೊಠಡಿ ನೀಡಿರುವ ಸುರೇಶ್ ಶೆಟ್ಟಿ ಕೆಲಸ ನೀಡಿದ ಅನ್ನದಾತರಾದರು. ಅಲ್ಲದೇ ಮಂಜುನಾಥ್ ಅವರು ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಮಾಡಿರುವುದು ಗಮನಾರ್ಹ ವಿಚಾರ.
ತಂದೆ ಹುಟ್ಟುರೂ ಬೆಳಗಾವಿಯಲ್ಲಿದ್ದರೂ ತಾಯಿ ನಿಂಗವವ್ವ ಇಲ್ಲಿಗೆ ಬಂದು ಎಂದಿಗೂ ಎದೆಗುಂದದೇ ತಮ್ಮ ಮಕ್ಕಳು ನಮ್ಮಂತೆ ಅವಿದ್ಯಾವಂತರಾಗ ಬಾರದು ಎಂಬು ಛಲದಿಂದ ಜೀವನದುದ್ದಕ್ಕೂ ಹೋರಾಡಿ ತನ್ನ ಐದು ಮಂದಿ ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ನೀಡಿದ ಶ್ರಮ ಜೀವಿ ಆಕೆ. ಐವರಲ್ಲಿ ಪ್ರಥಮನು ಈ ಮಂಜುನಾಥ್. ಅವರ ಇನ್ನೋರ್ವ ಸಹೋದರ ಉದ್ಯೋಗಲ್ಲಿದ್ದು ಒರ್ವ ತಮ್ಮ ಹಾಗೂ ಇಬ್ಬರು ತಂಗಿಯರು ವಿದ್ಯಾರ್ಜನೆ ನಡೆಸುತ್ತಿದ್ದಾರೆ. ಕಲಿಕೆಯಲ್ಲಿ ಮಾತ್ರವಲ್ಲದೇ ಕರಾಟೆ, ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಂಜುನಾಥ್ ವಿವೇಕಾನಂದ ಕಾಲೇಜಿನ 22-24ನೇ ಸಾಲಿನ ಉತ್ತಮ ಕ್ರೀಡಾ ಪ್ರಶಸ್ತಿಗೆ ಭಾಜನರಾಗಿದ್ದರು. ತನ್ನ ಬಾಲ್ಯದ ಜೀವನದಲ್ಲಿಯೇ ವಕೀಲನಾಗಬೇಕೆಂಬ ಕನಸಿನ ಗುರಿ ಹೊಂದಿದ್ದ ಮಂಜುನಾಥ್ ಛಲ ಬೀಡದೆ ವಿದ್ಯಾರ್ಥಿ ಜೀವನಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿ ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿ. ತನ್ನ ತರಬೇತಿಯನ್ನು ಪೂರ್ಣಗೊಳಿಸಿ ನಮ್ಮ ತಾಲೂಕಿನ ಈ ಹುಡುಗ ಮುಂಬರುವ ದಿನಗಳಲ್ಲಿ ನ್ಯಾಯಪೀಠದಲ್ಲಿ ಕುಳಿತುಕೊಂಡು ನ್ಯಾಯ ನೀಡುವ ಧೀಮಂತ ವ್ಯಕ್ತಿಯಾಗಿ ಹೊರ ಬರಲಿ ಎಂಬುವುದು ನಮ್ಮ ಆಶಯ.
ಹಣಕಾಸಿನ ಸಮಸ್ಯೆಯಿಂದ ಈ ಕುಟುಂಬದ ಯುವಕ ಮಂಜುನಾಥ್ ಶಿಕ್ಷಣಕ್ಕೆ ವಕೀಲ ಯತೀಶ್ ಶೆಟ್ಟಿ, ತನ್ನ ಆಪ್ತ ಗೆಳೆಯರು ಹಾಗೂ ತೋಟ ಯಾಜಮಾನರಾದ ಸುರೇಶ್ ಶೆಟ್ಟಿ ಯವರು ಸಹಾಯ ಮಾಡಿದ್ದಾರೆ ಅವರುಗಳ ಉಪಕಾರವನ್ನು ಎಂದಿಗೂ ಮರೆಯಾಲಾರೆ ಎನ್ನುತ್ತಾರೆ ಮಂಜುನಾಥ್.
ನಾನು ಅವಿದ್ಯಾವಂತೆ ನನ್ನ ಮಕ್ಕಳು ಅಕ್ಷರಸ್ಥರು ಆಗಬೇಕು ಹಂಬಲದಿAದ ಇಲ್ಲಿಗೆ ಬಂದು ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಅವರಿರುವರ ಸಹಾಯದಿಂದ ಮಗ ವಿದ್ಯಾಭ್ಯಾಸ ಪೂರೈಸಿ ನ್ಯಾಯಾಧೀಶಾರಗಿ ಆಯ್ಕೆಗೊಂಡಿರುವ ಹೆಮ್ಮೆ ತಂದಿದೆ ಎಂದು ಮಂಜುನಾಥ್ ತಾಯಿ ನಿಂಗವ್ವ ತಿಳಿಸಿದ್ದಾರೆ.
ನಮ್ಮ ಜೀವನ ಹಂತವು ಯಾವುದೇ ಸ್ಥಿತಿಯ ಹಂತದಲ್ಲಿದ್ದರೂ ದ್ವಂದ್ವ ಮನಸ್ಸಿನಿಂದ ಇರದೇ ಒಂದೇ ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಬೇಕು. ನನ್ನ ಕನಸು ನನಸಾಗಿದ್ದು ಸಿವಿಲ್ ನ್ಯಾಯಾಧೀಶನಾಗಿ ಆಯ್ಕೆಗೊಂಡಿರುವುದು ಹರ್ಷ ತಂದಿದೆ ಎಂದು ಮಂಜುನಾಥ್ ಶಿವಲಿಂಗಪ್ಪ ಜಿ. ಹೇಳಿದರು.
-ವರದಿ ಮನೀಶ್ ವಿ.ಅಂಚನ್ ಪಾಲೇದು.











