ಬೆಳ್ತಂಗಡಿ : ಮೂರು ವರ್ಷಗಳ ಹಿಂದೆ ಶಿಬಾಜೆಯಲ್ಲಿ ತೋಟದ ಒಳಗೆ ನಡೆದ ಶ್ರೀಧರ ಎಂಬವರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಸರ್ಕಾರ ಎಸ್ ಐಟಿ ರಚನೆ ಮಾಡಿ ಆದೇಶ ಮಾಡಿದೆ. ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿರುವ ಆರೋಪ ಆರಂಭದಿಂದಲೂ ಕೇಳಿ ಬಂದಿತ್ತು ಈ ಹಿನ್ನಲೆಯಲ್ಲಿ ಬೆಳ್ತಂಗಡಿಯ ದಲಿತ ಸಂಘಟನೆಗಳು ಬೃಹತ್ ಹೋರಾಟಗಳನ್ನು ನಡೆಸಿದ್ದರು. ಆದರೆ ಶ್ರೀಧರನ ಕೊಲೆ ಪ್ರಕರಣದ ಆರೋಪಿಗಳು ಪತ್ತೆಯಾಗಲೇ ಇಲ್ಲ ಪೊಲೀಸ್ ತನಿಖೆ ಸಮರ್ಪಕವಾಗಿ ನಡೆಯದ ಹಿನ್ನಲೆಯಲ್ಲಿ ಹರೀಶ್ ಮುಗೇರ ಎಂಬವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿಕೊಂಡಿದ್ದರು. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಬಳಿಕ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಇದೀಗ ರಾಜ್ಯ ಸರಕಾರ ವಿಶೇಷ ತನಿಖಾ(SIT) ತಂಡವನ್ನು ರಚಿಸಿ ಫೆ.20 ರಂದು ಆದೇಶ ಹೊರಡಿಸಿದೆ.
ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಭೂ ರಾವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ತಂಡದಲ್ಲಿ ಉಡುಪಿ ಜಿಲ್ಲಾ ಎಸ್.ಪಿ ಹರಿರಾಮ್ ಶಂಕರ್ ಐಪಿಎಸ್, ಡಿ.ವೈ.ಎಸ್.ಪಿ ಎಂ ಆರ್ ಹರೀಶ್ ಅವರನ್ನು ತನಿಖಾ ತಂಡವಾಗಿ ಮಾಡಿ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಎಂ.ಎ.ಸಲೀಂ ಅವರ ಎಸ್ಐಟಿ ಮಾಡಿ ಫೆ.20 ರಂದು ಆದೇಶ ಮಾಡಿದ್ದಾರೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರ ಫಾರ್ಮ್ ಗುತ್ತು ಮನೆ ಎಂಬಲ್ಲಿ ಎ.ಸಿ.ಕುರಿಯನ್ ಮಾಲೀಕತ್ವದ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡಿತ್ತಿದ್ದ ಶ್ರೀಧರ(30ವ) ಎಂಬವರನ್ನು 17-12-2022 ರಂದು ಸಂಜೆ 5:30 ರಂದು ಪರಿಚಯಸ್ಥರಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ,ಕೆ.ಎಲ್.ಆನಂದ ಗೌಡ ಹಾಗೂ ಮಹೇಶ್ ಎಂಬವರು ಸೇರಿ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಬಳಿಕ ಹಲ್ಲೆಯಿಂದ ಗಾಯಗೊಂಡು ವಿಶ್ರಾತಿ ಕೊಠಡಿಯಲ್ಲಿ ಮಲಗಿದ್ದ ಶ್ರೀಧರ ಅವರ ಶವ. ಮರುದಿನ 18-12-2022 ರಂದು ಬೆಳಗ್ಗೆ 6-30 ಕ್ಕೆ 200-300 ಮೀಟರ್ ದೂರದಲ್ಲಿ ಅಡಕೆ ತೋಟದಲ್ಲಿ ಬೆತ್ತಲೆಯಾಗಿ ಕಂಡು ಬಂದಿತ್ತು. ಆರೋಪಿಗಳು ಕೊಠಡಿಗೆ ಬಂದು ಕೊಲೆ ಮಾಡಿ ತೋಟದಲ್ಲಿ ಬಿಸಾಕಿ ಅವರ ಬಳಿ ಇದ್ದ 9,500 ರೂಪಾಯಿ ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಈ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ 91/2022 ಕಲಂ 302,323,392, ರೆ/ವಿ34 IPC ಹಾಗೂ ಕಲಂ 3(2)(v)3(2),(via) SC/ST (Poa) act ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.











