ಬೆಳ್ತಂಗಡಿ: ನವದೆಹಲಿಯಲ್ಲಿ ಮಾ.11 ರಂದು ನಡೆಯಲಿರುವ ಜಲ್ ಮಹೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ದಕ್ಷಿಣ ಜಿಲ್ಲೆಯಲ್ಲಿಯೇ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿಯ ಮಹಿಳಾ ಸದಸ್ಯೆ ಸವಿತಾ ಅವರನ್ನು ಆಹ್ವಾನಿಸಲಾಗಿದೆ.
ರಾಷ್ಟ್ರಪತಿಗಳ ಅಧ್ಯಕ್ಷತೆಯಲ್ಲಿ ಮಾ.೧೧ರಂದು ಜಲ್ ಮಹೋತ್ಸವ ಸಮಾರಂಭವನ್ನು ವಿಜ್ಞಾನಭವನ ನವದೆಹಲಿಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನ ಸುಸ್ಥಿರತೆ, ೨೪*೭ ಕುಡಿಯುವ ನೀರಿನ ಪದ್ಧತಿ ಜಾರಿ, ಮೇಲ್ವಿಚಾರಣೆ ಮತ್ತು ನಿರ್ವಹಣೆ, ನಲ್ ಜಲ್ ಮಿತ್ರ ಗ್ರಾಮ, ನೀರು ಮತ್ತು ನೈರ್ಮಲ್ಯ ಸಮಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಹಿಳಾ ಸದಸ್ಯರನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿ ತಾಲೂಕಿನ ಸವಿತಾ ಅವರು ಆಯ್ಕೆಗೊಂಡಿದ್ದಾರೆ. ಇವರು ತಣ್ಣೀರುಪಂತ ಸುಗಮ ಸಂಜೀವಿನಿ ಒಕ್ಕೂಟ ನಿಕಟಪೂರ್ವ ಅಧ್ಯಕ್ಷೆ ಹಾಲಿ ಸದಸ್ಯರಾಗಿದ್ದಾರೆ. ಘನ ತ್ಯಾಜ್ಯ ಘಟಕದ ಸಿಬ್ಬಂದಿ, ಗ್ರಾಮ ಪಂಚಾಯತ್ ಕುಡಿಯುವ ನೀರು ಸರಬರಾಜಿನಲ್ಲಿ ಪಂಪ್ ಆಪರೇಟರ್ ಮತ್ತು ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ ನೆಲೆಯಲ್ಲಿ ಆಯ್ಕೆಗೊಂಡ ಇವರು ಕರಾಯದ ಪುಂಜಾಲ ನಿವಾಸಿಯಾಗಿದ್ದಾರೆ. ಇವರು ದೆಹಲಿ ಪಯಣ ಆರಂಭಿಸಿದ್ದಾರೆ.
ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾರ್ಚ್ ೮ ರಿಂದ ಮಾರ್ಚ್ 22 ರವರೆಗೆ ಜಲ ಮಹೋತ್ಸವ ೨೦೨೬ ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಹಿಳಾ ದಿನ ಮತ್ತು ವಿಶ್ವ ಜಲ ದಿನವನ್ನು ಸಂಯೋಜಿಸುತ್ತದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರಿನ ನಿರ್ವಹಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಗುಜರಾತ್ನ ನವಸಾರಿಯಿಂದ ಜಲ ಅರ್ಪಣ ಸಮಾರಂಭಗಳೊಂದಿಗೆ ದೇಶವ್ಯಾಪ್ತಿಯಾಗಿ ಆರಂಭಿಸಲಾಗಿದ್ದು, ನೀರು ಸರಬರಾಜು ಯೋಜನೆಗಳನ್ನು ಗ್ರಾಮ ಪಂಚಾಯತ್ಗಳು ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ ಹಸ್ತಾಂತರಿಸುವುದನ್ನು ಸೂಚಿಸುತ್ತದೆ. ಈ ಅಭಿಯಾನವು ಜನ ಭಾಗಿದಾರಿ ಮತ್ತು ಗ್ರಾಮೀಣ ಕೊಳವೆ ನೀರಿನ ವ್ಯವಸ್ಥೆಗಳ ಸಮುದಾಯ ಮಾಲೀಕತ್ವವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.













