ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ “ಪರಾಭವ ನಾಮ”ಸಂವತ್ಸರಾರಂಭದ ಶುಭ ದಿನವಾದ ಮಾ. 19ರಂದು ವಿಶೇಷ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಬೇವು ಬೆಲ್ಲ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

”ಗೀತಾ ಗ್ರಾಮ” ಅನುಷ್ಠಾನದ ಭಾಗವಾಗಿ ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಭಗವದ್ಗೀತಾ ತರಗತಿ ಹಾಗೂ ವಿಷ್ಣು ಸಹಸ್ರನಾಮ ತರಗತಿಗಳಿಗೆ ಪೂರಕವಾಗಿ ಈ ದಿನದಂದು ರಾಮಾಯಣ ತರಗತಿಗೆ ವಿಧ್ಯುಕ್ತವಾಗಿ ಚಾಲನೆಯನ್ನು ನೀಡಲಾಯಿತು. ಕರ್ನಾಟಕ ಸರಕಾರದ ಮಾಜಿ ಸಚಿವರು, ಪ್ರಸನ್ನ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ. ಗಂಗಾಧರ ಗೌಡ ಇವರು ದೀಪ ಪ್ರಜ್ವಲನವನ್ನು ನಡೆಸಿಕೊಟ್ಟರು.

ನಾವೂರು ದೇವಸ್ಥಾನದ ಮೂಲಕ ನಡೆಯುತ್ತಿರುವ ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳಿಗೆ ರಾಮಾಯಣ ತರಗತಿಯನ್ನು ಉದ್ಘಾಟಿಸುತ್ತಾ “ಭಾರತ ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆಗಳಲ್ಲಿ ರಾಮಾಯಣ ಹಾಗೂ ಮಹಾಭಾರತಕ್ಕೆ ಮೇಲ್ಮಟ್ಟದ ಸ್ಥಾನವಿದೆ. ಇಂದಿನ ಕಾಲಮಾನಕ್ಕೆ ಈ ಗ್ರಂಥಗಳು ಕೊಟ್ಟಿರುವ ಮೌಲ್ಯಗಳು ಬಹಳಷ್ಟು ಪ್ರಸ್ತುತವಾಗಿವೆ. ಮುಂದಿನ ಪೀಳಿಗೆಗೆ ಇಂತಹ ಮೌಲ್ಯಗಳು ಅನಿವಾರ್ಯವಾಗಿವೆ. ಇಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳು ಇಡೀ ಸಮಾಜಕ್ಕೆ ಮಾದರಿಯಾಗಲಿ” ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯತಿನ ಮಾಜಿ ಸದಸ್ಯರಾಗಿರುವ ರಾಜಶೇಖರ ಅಜ್ರಿಯವರು ಇಲ್ಲಿನ ಭಕ್ತರ ತೊಡಗಿಸಿಕೊಳ್ಳುವಿಕೆಯನ್ನು ಪ್ರಶಂಸಿಸಿದರು. ರಾಮಾಯಣ ತರಗತಿಯನ್ನು ನಡೆಸಿ ಕೊಡಲು ನಿವೃತ್ತ ಪ್ರಾಚಾರ್ಯರೂ ಕನ್ನಡ ವಿದ್ವಾಂಸರೂ ಆಗಿರುವ ಪ್ರೊ। ಗಣಪತಿ ಭಟ್ ಕುಳಮರ್ವ ಅವರು ಸಹಕರಿಸುವವರಿದ್ದು ವಿದ್ಯಾರ್ಥಿಗಳಿಗೆ ರಾಮಾಯಣದ ಪೂರ್ವ ಪೀಠಿಕೆಯನ್ನು ತಿಳಿಸಿ ಕೊಟ್ಟರು. ಶ್ರೀಮತಿ ವಸಂತಿ ಕುಳಮರ್ವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಡ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಪ್ರವೀಣ್ ವಿ. ಜಿ, ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ಜೈನ್ ಎಸ್. ಶುಭ ಹಾರೈಸಿದರು.

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಡಾ। ಪ್ರದೀಪ್ ಆಟಿಕುಕ್ಕೆ ಮಾತನಾಡಿದರು. ಟ್ರಸ್ಟಿ ಹರೀಶ್ ಕಾರಿಂಜ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವದ ಸಂಚಾಲಕ ಮೋಹನ್ ಬಂಗೇರ ಧನ್ಯವಾದವಿತ್ತರು. ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಎ.ಬಿ. ಉಮೇಶ್ ಅತ್ಯಡ್ಕ, ಉಪಾಧ್ಯಕ್ಷೆ ತನುಜಾ ಶೇಖರ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಕಾರ್ಯದರ್ಶಿ ತಿಮ್ಮಪ್ಪ ಜಿ ,ಕೋಶಾಧಿಕಾರಿ ಉಮೇಶ್ ಪ್ರಭು, ಟ್ರಸ್ಟಿಗಳಾದ ಗಣೇಶ್ ಕಣಾಲು, ತನಿಯಪ್ಪ , ಗಣೇಶ್ ಗೌಡ , ಜಾತ್ರಾ ಸಮಿತಿಯ ಉಪಾಧ್ಯಕ್ಷರಾದ ಪೂವಪ್ಪ ಗೌಡ ಹಾಗೂ ಡಾ। ಕವಿತಾ ಪ್ರದೀಪ್ ಉಪಸ್ಥಿತರಿದ್ದರು. ಊರ ಪರವೂರ ಗಣ್ಯರು ಭಾಗವಹಿಸಿದರು.
ಪ್ರಧಾನ ಅರ್ಚಕರಾದ ವೇ।ಮೂ। ದಿನೇಶ್ ಭಟ್ ಇವರು ಪೂಜಾ ವಿಧಿಗಳನ್ನು ಹಾಗೂ “ಪಂಚಾಂಗ ಶ್ರವಣ” ವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ “ನಾವೂರಿನ ನಂದಲಾಲಾ…ಗೋಪಾಲಕೃಷ್ಣ ….” ಆಡಿಯೋ ಆಲ್ಬಮ್ ಬಿಡುಗಡೆಯನ್ನು ಗಣ್ಯರು ನೆರವೇರಿಸಿಕೊಟ್ಟರು. ನಾವೂರಿನ ಅಶೋಕ್, ಪ್ರವೀಣ್, ವಿನ್ಯಾಸ್ ನೇತೃತ್ವದ ಯುವಕರ ಹೊಸ ತಂಡ – “ಅಶ್ವ ಗ್ರೂಪ್ಸ್” ಗೆ ಗಣ್ಯರು ಚಾಲನೆಯನ್ನು ನೀಡಿ ಶುಭ ಹಾರೈಸಿದರು.













