ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಕ್ಷೇತ್ರ ಬಳಂಜದ ಶ್ರೀ ಪಂಚಲಿಂಗೇಶ್ವರ ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2026ರ ಮಾರ್ಚ್ 19 ರಿಂದ ಮಾರ್ಚ್ 25ರ ವರೆಗೆ ವಾರ್ಷಿಕ ಜಾತ್ರೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಲಿದೆ.
ದೇಗುಲದ ಬ್ರಹ್ಮಕಲಶೋತ್ಸವವು ಶಾಸಕ ಹರೀಶ್ ಪೂಂಜರ ಅದ್ಯಕ್ಷತೆಯಲ್ಲಿ ನಡೆದು 12 ವರ್ಷಗಳು ಸಂದಿವೆ. ಈ ನಿಟ್ಟಿನಲ್ಲಿ ಉತ್ಸವದ ಅಂಗವಾಗಿ ಮಾರ್ಚ್ 25ರಂದು ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯಲ್ಲಿರುವ ಐತಿಹಾಸಿಕ ಕೇರಿಂಜ ಬೆಟ್ಟಕ್ಕೆ ‘ಕೇರಿಂಜ ಯಾತ್ರೆ’ ಅಮ್ಮನ ಮೂಲ ಸ್ಥಾನದೆಡೆಗೆ ನಮ್ಮ ನಡಿಗೆ – ವಿಶೇಷ ಪಾದಯಾತ್ರೆ ಆಯೋಜಿಸಲಾಗಿದೆ
ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ ಬೃಹತ್ ಸಂಕಲ್ಪ: 2014ರಲ್ಲಿ ನಡೆದ ಭವ್ಯ ಬ್ರಹ್ಮಕಲಶೋತ್ಸವದ ಯಶಸ್ಸಿನ ರೂವಾರಿ, ಕ್ಷೇತ್ರದ ಹೆಮ್ಮೆಯ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಈ ಬಾರಿಯ ಪಾದಯಾತ್ರೆ ನಡೆಯಲಿದೆ. ಮಾ.25ರಂದು ಪೂರ್ವಾಹ್ನ 9 ಗಂಟೆಗೆ ಶಾಸಕರು ಉದ್ಘಾಟಿಸಲಿದ್ದಾರೆ. ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಉಪಸ್ಥಿತಿ ವಹಿಸಲಿದ್ದಾರೆ.
ಕೈಲಾಸವಾಸಿ ಉಮಾಮಹೇಶ್ವರನ ಆವಾಸಸ್ಥಾನವಾದ ಕೇರಿಂಜ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಪ್ರಾರ್ಥನೆ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬಳಂಜದ ಸಮಸ್ತ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಬಳಂಜ, ನಾಲ್ಕೂರು ಹಾಗೂ ತೆಂಕಕಾರಂದೂರು ಗ್ರಾಮದ ಸಮಸ್ತ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ ಎಂದು ಶ್ರೀ ಪಂಚಲಿಂಗೇಶ್ವರ ಭಕ್ತವೃಂದದ ಪರವಾಗಿ ಅಶ್ವಥ್ ಹೆಗ್ಡೆ ಬಳಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













