ಕಕ್ಯಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ 8 ಹಾಗೂ 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹೆಚ್ಪಿವಿ ಲಸಿಕೆ ಕುರಿತು ಮಾಹಿತಿ ಶಿಬಿರವನ್ನು ಮಾ. 31ರಂದು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರದ ಮುಖ್ಯ ಉದ್ದೇಶವು ಹೆಚ್ಪಿವಿ ವೈರಸ್ ಬಗ್ಗೆ ಅರಿವು ಮೂಡಿಸುವುದು ಮತ್ತು ಅದರ ವಿರುದ್ಧದ ಲಸಿಕೆಯ ಮಹತ್ವವನ್ನು ಜನರಿಗೆ ತಿಳಿಸುವುದಾಗಿತ್ತು.
ಕಾರ್ಯಕ್ರಮದಲ್ಲಿ ಆಗಮಿಸಿದ ಅಮ್ಮಿ ಎ. ಆರೋಗ್ಯ ಶಿಕ್ಷಣಾಧಿಕಾರಿ, ಬೆಳ್ತಂಗಡಿ ಹಾಗೂ ಭವಾನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅವರು ಹೆಚ್ಪಿವಿ ವೈರಸ್ ಹೇಗೆ ಹರಡುತ್ತದೆ, ಇದರಿಂದ ಉಂಟಾಗುವ ರೋಗಗಳು, ವಿಶೇಷವಾಗಿ ಮಹಿಳೆಯರಲ್ಲಿ ಕಾಣುವ ಗರ್ಭಾಶಯದ ಕ್ಯಾನ್ಸರ್ ಬಗ್ಗೆ ವಿವರವಾಗಿ ತಿಳಿಸಿದರು. ಹೆಚ್ಪಿವಿ ಲಸಿಕೆ ಈ ರೋಗವನ್ನು ತಡೆಯಲು ಪರಿಣಾಮಕಾರಿ ವಿಧಾನವೆಂದು ಅವರು ಹೇಳಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಲಸಿಕೆಯ ಅಗತ್ಯತೆ, ಲಸಿಕೆ ಪಡೆಯುವ ಸರಿಯಾದ ವಯಸ್ಸು (ಸಾಮಾನ್ಯವಾಗಿ 9 ರಿಂದ 14 ವರ್ಷಗಳೊಳಗಿನ ಮಕ್ಕಳಿಗೆ) ಹಾಗೂ ಅದರ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಶ್ನೋತ್ತರ ಕಾರ್ಯಕ್ರಮದ ಮೂಲಕ ಭಾಗವಹಿಸಿದವರು ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಹಸ್ತಪತ್ರಿಕೆಗಳನ್ನು ವಿತರಿಸಲಾಯಿತು. ಈ ಶಿಬಿರವು ಎಲ್ಲರಿಗೂ ಉಪಯುಕ್ತ ಮತ್ತು ಜ್ಞಾನವರ್ಧಕವಾಗಿದ್ದು, ಬಗ್ಗೆ ಜಾಗೃತಿ ಹೆಚ್ಚಿಸಲು ಸಹಾಯಕವಾಯಿತು
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿ ವಿಜಯ ಕೆ., ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಜಿ.ಸ್ವಾಗತಿಸಿ, ಮುಖ್ಯಶಿಕ್ಷಕಿ ವಿಜಯಾ ಕೆ. ವಂದಿಸಿದರು.












