ಬೆಳ್ತAಗಡಿ: ಕೊಯ್ಯೂರು ಗ್ರಾಮದಲ್ಲಿ ಅರಣ್ಯ ಇಲಾಖೆ ತಮ್ಮ ಜಮೀನು ಗುರುತಿಸುವ ನಿಟ್ಟಿನಲ್ಲಿ ಮಲೆಕುಡಿಯ ಸಮುದಾಯದವರು ಕೃಷಿ ಮಾಡಿಕೊಂಡು ಬಂದಿದ್ದ ಕೃಷಿಭೂಮಿಯೊಳಗೆ ಕಲ್ಲಿನ ಗುಪ್ಪೆ ಹಾಕುವ ಕಾರ್ಯ ಮಾಡಿದ್ದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಕೊಯ್ಯೂರು ಗ್ರಾಮದ ದುಗಲಾಯಿಬೆಟ್ಟು, ಕುಲ್ಲಾಜೆ ಈ ಪ್ರದೇಶದಲ್ಲಿ ಸುಮಾರು 80 ವರ್ಷ ಹಿಂದಿನಿಂದಲೂ ಮಲೆಕುಡಿಯ ಸಮುದಾಯದ ಜನರು ಬದುಕನ್ನು ನಡೆಸುತ್ತಾ ಬಂದಿದ್ದು, ಇಲ್ಲಿನ ನಿವಾಸಿಗಳಾದ ನಿರಂಜನ ಮಲೆಕುಡಿಯ, ಕೃಷ್ಣಪ್ಪ ಮಲೆಕುಡಿಯ, ನೋಣಯ್ಯ ಮಲೆಕುಡಿಯ, ಧರ್ಮರಾಜ್ ಮಲೆಕುಡಿಯ ಅವರ ಕೃಷಿ ಭೂಮಿಯ ನಡುವೆ ಅರಣ್ಯ ಇಲಾಖೆ ತಮ್ಮ ಗಡಿ ಗುಪ್ಪೆಗಳನ್ನು ನಿರ್ಮಿಸಿದೆ. ಸರ್ವೆ ನಂಬರ್ 60 ರಲ್ಲಿ ಇವರಿಗೆ ಸರಕಾರದಿಂದ ಹಕ್ಕುಪತ್ರವನ್ನೂ ನೀಡಲಾಗಿದೆ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಇವರ ಬಳಿ ಇದೆ.
ಆದರೆ ಕೃಷಿಕರಿಗೆ ಯಾವುದೇ ಮಾಹಿತಿ ನೀಡದೆ ಜಂಟಿ ಸರ್ವೆ ಮಾಡದೆ ಏಕಾಏಕಿ ಅರಣ್ಯ ಇಲಾಖೆ ಕೃಷಿಭೂಮಿಗೆ ಪ್ರವೇಶಿಸಿ ಗುಪ್ಪೆ ನಿರ್ಮಿಸುವ ಕಾರ್ಯ ಮಾಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಇದಲ್ಲದೆ ಇದರ ಸಮೀಪವಿರುವ ಮ್ಯಾಥ್ಯೂ ಹಾಗೂ ಸಿಬಿ ಎಂಬವರ ಜಾಗದಲ್ಲಿಯು ಇಲಾಖೆ ಗುಪ್ಪೆ ನಿರ್ಮಿಸಿದ್ದು, ಸರ್ವೆ ಮಾಡದೆ ನೋಟೀಸ್ ನೀಡದೆ ಯಾವ ಆಧಾರದ ಮೇಲೆ ಕೃಷಿ ಭೂಮಿಯಲ್ಲಿ ಗುಪ್ಪೆ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಈಗಾಗಲೇ ಕಂದಾಯ, ಅರಣ್ಯ ಜಮೀನಿನ ನಡುವೆ ಬಾರಿ ಗೊಂದಲವಿದೆ. ಈ ಜಮೀನಿನ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಿಸಿದೆ. ಇದರ ನಡುವಯೇ ಅರಣ್ಯ ಇಲಾಖೆಯು ಗುಪ್ಪೆ ನಿರ್ಮಿಸುತ್ತಿರುವುದು ಜನರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.













