ಬೆಳ್ತಂಗಡಿ: ಇಂದಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಪಾಶ್ಚಾತ್ಯ, ಸಿನಿಮಾ ಸಂಸ್ಕೃತಿ, ನೃತ್ಯ ಸಹಿತ ನಾನಾ ಆಡಂಬರಗಳು ಸಾಮಾನ್ಯವಾಗಿದ್ದಾರೆ ಮೇ 14 ರಂದು ನಡೆದ ವಿವಾಹ ಸಮಾರಂಭ ಒಂದರಲ್ಲಿ ಸಾಮೂಹಿಕ ವಿಷ್ಣು ಸಹಸ್ರ ನಾಮವನ್ನು ಪಠಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಬೆಂಗಳೂರಿನ ಪ್ರಮೀಳಾ ಹಾಗೂ ಅಂತ್ರ ಹರೀಶ್ ರಾವ್ ದಂಪತಿ ಪುತ್ರ ಶ್ರೀಹರಿದಾಸ ಅವರ ವಿವಾಹ ಬೆಂಗಳೂರಿನ ರಶ್ಮಿ ಹಾಗೂ ಶ್ರೀಧರ ಬಿ.ಎಸ್. ಅವರ ಪುತ್ರಿ ಸ್ವಾತಿ ಮನಸ್ವಿನಿಯ ಜತೆ ಜರಗಿತು. ಮಧ್ಯಾಹ್ನ 12.05ರ ಸುಮೂಹೂರ್ತದಲ್ಲಿ ನಡೆದ ವಿವಾಹ ಸಮಾರಂಭದ ಸುಮಾರು 25 ನಿಮಿಷಗಳ ಕಾಲ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇಲ್ಲಿನ ಸದಸ್ಯರು ಹಾಗೂ ಭಕ್ತರು ನಾವೂರಿನ ವೈದ್ಯ ಡಾ. ಪ್ರದೀಪ್ ಆಟಿಕುಕ್ಕೆಯವರ ನೇತೃತ್ವದಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದ 400ಕ್ಕಿಂತಲೂ ಅಧಿಕ ಮಂದಿಯ ಜೊತೆ ವಿಷ್ಣು ಸಹಸ್ರನಾಮವನ್ನು ಏಕಕಾಲದಲ್ಲಿ ಪಠಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಹಳೆ ಪದ್ಧತಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ನಮ್ಮ ಪದ್ಧತಿಗಳ ಹಿಂದೆ ಅನೇಕ ವೈಜ್ಞಾನಿಕ ಹಿನ್ನೆಲೆಗಳು ಇದ್ದು, ಇವುಗಳ ಮಹತ್ವ ಅರಿತು ಇದನ್ನು ಮುಂದಿನ ಪೀಳಿಗೆಗೂ ತಲುಪಿಸುವಂತೆ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದು ವರನ ಸೋದರ ಮಾವ ಚಾರ್ಮಾಡಿಯ ಪ್ರಕಾಶ ನಾರಾಯಣ ರಾವ್ ಹೇಳಿದರು.













