ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ದೇವಸ್ಥಾನಕ್ಕೆ ಸಿಡಿಲು ಬಡಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಮೇ. 16ರ ಶನಿವಾರ ಸಂಜೆ ನಡೆದಿದೆ.

ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ಸುಮಾರು1 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಸಂಜೆ ಸುಮಾರು 4.30 ರ ವೇಳೆಗೆ ಸುರಿದ ಗಾಳಿ, ಮಳೆಯ ಜೊತೆಗೆ ಸಿಡಿಲಿನ ಅಬ್ಬರವು ಜೋರಾಗಿತ್ತು. ಭಾರೀ ಪ್ರಮಾಣದಲ್ಲಿ ಬಂದ ಸಿಡಿಲಿನ ಇಳಿಯೂರು ಶ್ರೀವಿಷ್ಣಮೂರ್ತಿ ದೇವಸ್ಥಾನದ ಗರ್ಭ ಗುಡಿಯ ಮೇಲಿನ ಪ್ರಾಕಾರದ ಶಿಲಾ ಕಲ್ಲು ಛಿದ್ರ, ಛಿದ್ರಗೊಂಡು ನೆಲಕ್ಕಪ್ಪಳಿಸಿದೆ.

ಈ ಸಂದರ್ಭದಲ್ಲಿ ದೇವಳದ ಅರ್ಚಕರು ಹೊರಭಾಗದಲ್ಲಿದ್ದುದರಿಂದ ಅವರಿಗೆ ಯಾವುದೇ ರೀತಿಯ ಅಪಾಯವುಂಟಾಗಿಲ್ಲ.ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದು, ಸಿಡಿಲಿಗೆ ದೇವಸ್ಥಾನದ ದೇವರ ಗರ್ಭಗುಡಿಗೂ ಹಾನಿಯಾಗಿದ್ದು,ಕೋಟ್ಯಾಂತರ ರೂ.ನಷ್ಟ ಸಂಭವಿಸಿದೆ. ಸಿಡಿಲು ಬಡಿದ ಕಾರಣದಿಂದ ಮತ್ತೆ ದೇವರ ಗುಡಿಯ ನವೀಕರಣ ಕಾರ್ಯ ನಡೆಯಬೇಕಿದೆ ಎಂದು ಹೇಳಲಾಗುತ್ತಿದೆ. ದೇವಳದ ಆಡಳಿತ ಟ್ರಸ್ಟಿಗಳು ಸೇರಿದಂತೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಬಗ್ಗೆ ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದೆ.














