ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ. ಐ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಎಡ್ ಹಾಗೂ ಡಿ.ಎಡ್ ಕಾಲೇಜು ಜಂಟಿಯಾಗಿ 80ನೇ ಸ್ವಾತಂತ್ರ್ಯೋತ್ಸವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಎಡ್ ಕಾಲೇಜಿನ ಆವರಣದಲ್ಲಿ ಆಚರಿಸಿದರು.
ಎಸ್.ಡಿ.ಎಂ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರೋ.ಡಾ.ಎ.ಜಯಕುಮಾರ್ ಶೆಟ್ಟಿ ಇವರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಎಂದರೆ ಕೇವಲ ಹಕ್ಕುಗಳಲ್ಲ; ಅದು ನಮ್ಮ ಕರ್ತವ್ಯಗಳನ್ನೂ ನೆನಪಿಸುತ್ತದೆ. ದೇಶದ ಪ್ರಗತಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಶಿಸ್ತು ಪಾಲಿಸುವುದು, ಪರಿಸರವನ್ನು ಕಾಪಾಡುವುದು ಹಾಗೂ ಉತ್ತಮ ನಾಗರಿಕರಾಗುವುದು ನಮ್ಮೆಲ್ಲರ ಜವಾಬ್ದಾರಿ. ಅಷ್ಟೇ ಅಲ್ಲ ನಮ್ಮ ದೇಶ ಅತೀ ಹೆಚ್ಚಿನ ಯುವ ಸಮುದಾಯ ಹೊಂದಿರುವ ದೇಶ, ಈ ಯುವ ಪ್ರಜೆಗಳು ತಮ್ಮ ವ್ತಕ್ತಿತ್ವ ಬೆಳೆಸುವತ್ತ ಹೆಚ್ಚಿನ ಗಮನ ಹರಿಸಬೇಕು ಅದೇ ದೇಶಕ್ಕೆ ನೀಡುವ ದೊಡ್ಡ ಕೊಡುಗೆ. “ನನ್ನ ದೇಶ – ನನ್ನ ಹೆಮ್ಮೆ, ನನ್ನ ಕರ್ತವ್ಯ – ಎಂದು ಭಾವಿಸಿ ದೇಶದ ಸೇವೆ ಮಾಡಿ” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮೂರೂ ಸಂಸ್ಥೆಯ ಪ್ರಾಂಶುಪಾಲರು, ಸಂಸ್ಥೆಯ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಎಸ್.ಡಿ.ಎಂ ಬಿ.ಎಡ್ ಕಾಲೇಜಿನ ಕ್ರೀಡಾ ಅಧಿಕಾರಿ ವೀಕ್ಷಿತಾ ಇವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಎಲ್ಲರಿಗೂ ಸಿಹಿ ವಿತರಿಸಿದರು.












