ಬೆಳ್ತಂಗಡಿ: ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇದರ ಗುಣಮಟ್ಟವನ್ನು ದೆಹಲಿಯ ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ವತಿಯಿಂದ ಮೇ 17ರಂದು ಪರಿಶೀಲಿಸಲಾಯಿತು.
ಸುಮಾರು 26 ಕಿ.ಮೀ. ಪ್ರದೇಶದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಈ ಭಾಗದ ಅಲ್ಲಲ್ಲಿ ನಡೆದ ಕಾಂಕ್ರೀಟಿಕರಣ, ಡಾಮಾರಿಕರಣ, ಸೇತುವೆ ನಿರ್ಮಾಣ ತಡೆಗೋಡೆ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳ ಪರಿಶೀಲನೆ ನಡೆಯಿತು.
ಮುಂದಿನ ಕೆಲವೇ ದಿನಗಳಲ್ಲಿ ಮಳೆಗಾಲ ಕಾಲಿರಿಸಲಿದ್ದು,ಪ್ರಸ್ತುತ ರಸ್ತೆಯ ಸ್ಥಿತಿ ಹೇಗಿದೆ, ನಡೆದಿರುವ ಕಾಮಗಾರಿಗಳಲ್ಲಿ ಏನಾದರೂ ಲೋಪದೋಷಗಳಿವೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಹಿರಿಯ ಅಧಿಕಾರಿ ಅಮಿತ್, ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಚಂದ್ರಶೇಖರ್ ಕೆ.ಟಿ., ಎಇಇ ಗುರುಪ್ರಸಾದ್, ಜಿತೇಂದ್ರ ಇತರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭಾಗವಹಿಸಿದ್ದರು.












